ಬೆಂಗಳೂರು: ‘ಸುಪ್ರೀಂ ಕೋರ್ಟ್ ಕೆಲ ಶಾಸಕರನ್ನು ಅನರ್ಹರು ಎಂದು ಹೇಳಿತು. ಚುನಾವಣೆಯಲ್ಲಿ ಮತ್ತೆ ನಿಲ್ಲಬಾರದು ಎಂಬ ಕಾನೂನುಇಲ್ಲದ ಕಾರಣ ಸ್ಪರ್ಧೆಗೆ ಅವಕಾಶ ನೀಡಿತು. ಮತಗಟ್ಟೆ ವ್ಯವಸ್ಥೆ ಅವರನ್ನು ಮರು ಆಯ್ಕೆ ಮಾಡಿತು’ ಎಂದುಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಬೇಸರ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಶನಿವಾರ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಪ್ರಶ್ನೆಗೆ ಅವರು ಉತ್ತರಿಸಿದರು.
‘ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರನ್ನು ಸನ್ಮಾನಿಸುವ ಸನ್ನಿವೇಶದಲ್ಲಿ ಸಮಾಜ ಇದೆ.ಮತದಾರರಿಂದ ಮಾತ್ರ ಹಾಳಾದ ವ್ಯವಸ್ಥೆ ಸರಿಪಡಿಸಲು ಸಾಧ್ಯ. ಮತಗಟ್ಟೆಯೇ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಬೇಕು’ ಎಂದರು.
‘ಚಿಕ್ಕಂದಿನಲ್ಲಿ ಶಾಲೆಗೆ ಹೋಗದೆ ಹಠ ಮಾಡುತ್ತಿದ್ದೆ. ನನ್ನ ತಾಯಿ ಶಾಲೆಗೆ ಹೋಗದಿದ್ದರೆ ಹೆಸರುಂಡೆ ಕೊಡುವುದಿಲ್ಲ ಎನ್ನುತ್ತಿದ್ದರು. ಅಮ್ಮನ ಹೆಸರುಂಡೆ ರುಚಿ ನನ್ನನ್ನು ಶಾಲೆಯೆಡೆಗೆ ಕಳುಹಿಸಿತು. ಇದರ ಫಲ ನಾನು ನ್ಯಾಯಮೂರ್ತಿ ಹುದ್ದೆಗೇರುವಂತೆ ಮಾಡಿತು’ ಎಂದು ತಮ್ಮ ಬಾಲ್ಯದ ದಿನಗಳನ್ನು ನೆನೆದರು.