ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಿತಾಗಾರ ಸಿಬ್ಬಂದಿಗೆ ವೇತನ ಪಾವತಿ’

Last Updated 16 ಏಪ್ರಿಲ್ 2021, 21:14 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸ್ಮಶಾನ ಮತ್ತು ವಿದ್ಯುತ್‌ ಚಿತಾಗಾರದ ಸಿಬ್ಬಂದಿ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ನಂತರ, ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗವು ಶುಕ್ರವಾರ ಕಲ್ಲಹಳ್ಳಿ ವಿದ್ಯುತ್‌ ಚಿತಾಗಾರಕ್ಕೆ ಭೇಟಿ ನೀಡಿ, ಸಿಬ್ಬಂದಿಯ ಅಹವಾಲು ಆಲಿಸಿತು.

ಆಯೋಗದ ಸದಸ್ಯ, ವಕೀಲ ಎಚ್. ವೆಂಕಟೇಶ ದೊಡ್ಡೇರಿ ಅವರು, ಚಿತಾಗಾರ ಸಿಬ್ಬಂದಿ ಮತ್ತು ಅವರ ಕುಟುಂಬದವರೊಂದಿಗೆ ಮಾತನಾಡಿ, ಸಮಸ್ಯೆ ಆಲಿಸಿದರು.

‘ನೌಕರರಿಗೆ ಸಂಬಳ ನೀಡಬೇಕು, ಅವರಿಗೆ ಉದ್ಯೋಗ ಭದ್ರತೆ ಒದಗಿಸಬೇಕು. ಅವರ ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಮಾಡುವುದರ ಜೊತೆಗೆ, ಕಾಯಂ ವಸತಿ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

‘ಕೋವಿಡ್‌ ಶವಗಳ ಸಂಸ್ಕಾರದ ವೇಳೆ ಬೇಕಾಗುವ ಅಗತ್ಯ ಸುರಕ್ಷಾ ಪರಿಕರಗಳನ್ನು ಸಿಬ್ಬಂದಿಗೆ ಒದಗಿಸಬೇಕು’ ಎಂದೂ ಅವರು ಹೇಳಿದರು.

ಬಿಬಿಎಂಪಿ ವಿಶೇಷ ಆಯುಕ್ತ ಡಿ. ರಂದೀಪ್‌, ‘ಬಿಬಿಎಂಪಿಯಲ್ಲಿ ಸ್ಮಶಾನ ಮತ್ತು ವಿದ್ಯುತ್‌ ಚಿತಾಗಾರ ಸಿಬ್ಬಂದಿಯ ಪೈಕಿ ಶೇ 95 ಮಂದಿಗೆ ವೇತನ ಬಿಡುಗಡೆ ಮಾಡಲಾಗಿದೆ. ಉಳಿದ ಶೇ 5ರಷ್ಟು ಸಿಬ್ಬಂದಿಗೆ ಕೂಡಲೇ ವೇತನ ನೀಡಲಾಗುವುದು’ ಎಂದರು.

‘ಚಿತಾಗಾರ ಸಿಬ್ಬಂದಿಗೆ ಸಮವಸ್ತ್ರ ನೀಡುವುದು, ಅವರಿಗೆ ವಸತಿ ಸೌಲಭ್ಯ ಕಲ್ಪಿಸುವ ಕುರಿತು ನೀತಿ ರೂಪಿಸಲಾಗುವುದು’ ಎಂದು ಭರವಸೆ ನೀಡಿದರು.

ಬಿಬಿಎಂಪಿ ಉಪ ಆಯುಕ್ತ ರಂಗನಾಥ, ಸ್ಮಶಾನ ನೌಕರರ ಸಂಘದ ಅಧ್ಯಕ್ಷ ಆ. ಸುರೇಶ್, ಕಾರ್ಯದರ್ಶಿ ರಾಜು ಕಲ್ಲಹಳ್ಳಿ ಇದ್ದರು.

ಚಿತಾಗಾರ ಸಿಬ್ಬಂದಿಗೆ 10 ತಿಂಗಳಿನಿಂದ ವೇತನ ಪಾವತಿಯಾಗದಿರುವ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT