ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನೀರು ಉಳಿತಾಯದ ಪಂಚಸೂತ್ರ ಅಳವಡಿಕೆಗೆ ಏ.10ರ ಗಡುವು

Published 1 ಏಪ್ರಿಲ್ 2024, 16:21 IST
Last Updated 1 ಏಪ್ರಿಲ್ 2024, 16:21 IST
ಅಕ್ಷರ ಗಾತ್ರ

ಬೆಂಗಳೂರು: ನೀರು ಉಳಿತಾಯದ ಪಂಚಸೂತ್ರಗಳನ್ನು ಏಪ್ರಿಲ್‌ 10ರೊಳಗೆ ಅಳವಡಿಸಿಕೊಳ್ಳಬೇಕು ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್‌ಪ್ರಸಾತ್‌ ಮನೋಹರ್‌ ಹೇಳಿದರು.

40 ಲಕ್ಷದಿಂದ 2 ಕೋಟಿ ಲೀಟರ್‌ ನೀರು ಬಳಸುವ ಗ್ರಾಹಕರ ಜೊತೆ ಸಭೆ ನಡೆಸಿ ‘ಗ್ರೀನ್ ಸ್ಟಾರ್ ಚಾಲೆಂಜ್’ನ ಪಂಚ ಸೂತ್ರಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದರು. ಸರಬರಾಜು ಆಗುತ್ತಿರುವ ನೀರಿನಲ್ಲಿ ಏ.10 ನಂತರ ಶೇಕಡ 10 ರಷ್ಟು ಕಡಿತಗೊಳಿಸಲಾಗುತ್ತದೆ ಎಂದರು.

‘ನಗರದಲ್ಲಿ ಕುಡಿಯುವ ನೀರಿನ ಕೊರತೆ ಇಲ್ಲ. ಆದರೆ ಅಂತರ್ಜಲ ಕುಸಿತದಿಂದ ದಿನ ಬಳಕೆಯ ನೀರಿನ ಮೇಲೆ ಪರಿಣಾಮ ಬೀರಿದೆ. ಮುಂದಿನ ಎರಡು ತಿಂಗಳು ನೀರಿನ ಮಿತವ್ಯಯ ಬಳಕೆಯಿಂದ ನಾವು ಈ ಪರಿಸ್ಥಿತಿಯನ್ನು ನಿಭಾಯಿಸಬಹುದಾಗಿದೆ’ ಎಂದು ಹೇಳಿದರು.

‘ನೀರು ಉಳಿತಾಯ ಮಾಡುವಂತಹ ತಂತ್ರಜ್ಞಾನಗಳನ್ನ ಅಳವಡಿಸಿಕೊಳ್ಳುವುದು, ಸಂಸ್ಕರಿಸಿದ ನೀರಿನ ಬಳಕೆ ಹೆಚ್ಚಿಸಿಕೊಳ್ಳುವುದು, ಕೊಳವೆ ಬಾವಿಗಳ ಬಳಕೆಯಲ್ಲಿ ತಂತ್ರಜ್ಞಾನದ ಅಳವಡಿಕೆ, ಮಳೆ ನೀರು ಇಂಗುಗುಂಡಿಗಳನ್ನ ಅಳವಡಿಸಿಕೊಳ್ಳುವ ಈ ಪಂಚಸೂತ್ರಗಳನ್ನು  ಕಾರ್ಯಗತ ಮಾಡುವ ಸವಾಲು ಸ್ವೀಕರಿಸಬೇಕು’ ಎಂದರು.

ಪೈಪ್‌ಲೈನ್‌: ಖಾಸಗಿ ಅಪಾರ್ಟ್‌ಮೆಂಟ್ ಹಾಗೂ ಜಲಮಂಡಳಿ ತ್ಯಾಜ್ಯ ನೀರು ಶುದ್ಧಿಕರಣ ಘಟಕದಿಂದ 500 ಮೀಟರ್ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ದೊಡ್ಡ ಕಟ್ಟಡಗಳ ಬಳಕೆಗೆ ಪ್ರತ್ಯೇಕ ಪೈಪ್ ಲೈನ್ ಮೂಲಕ ಸಂಸ್ಕರಿತ ನೀರು ಸರಬರಾಜು ಮಾಡಲಾಗುವುದು ಎಂದು ರಾಮ್‌ಪ್ರಸಾತ್‌ ಹೇಳಿದರು.

ಅಪಾರ್ಟ್‌ಮೆಂಟ್‌ಗಳು ಸಂಸ್ಕರಿಸಿದ ನೀರನ್ನು ಮಾರಾಟ ಮಾಡಲು ಈಗಾಗಲೇ ಅನುಮತಿ ನೀಡಲಾಗಿದೆ. ಕಟ್ಟಡ ನಿರ್ಮಾಣಕ್ಕೆ ಸಂಸ್ಕರಿಸಿದ ನೀರನ್ನು ಮಾತ್ರ ಬಳಕೆ ಮಾಡಬೇಕು ಎಂದು ಆದೇಶಿಸಲಾಗಿದೆ. ಜಲಮಂಡಳಿಗೆ 62 ಲಕ್ಷ ಲೀಟರ್ ಸಂಸ್ಕರಿಸಿದ ನೀರಿಗೆ ಬೇಡಿಕೆ ಬಂದಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸಂಸ್ಕರಿಸಿದ ನೀರನ್ನು ಮಾರಾಟ ಮಾಡುವ ಮೂಲಕ ಜಲಮಂಡಳಿಗೆ ಆದಾಯವೂ ಹೆಚ್ಚಾಗಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT