ಕೆ.ಆರ್.ಪುರ: ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಅತ್ಯಾಧುನಿಕ ನೂತನ ಶ್ರೀ ವಿಜಯ ಗಣಪತಿ ಡಯಾಲಿಸಿಸ್ ಕೇಂದ್ರದ ಕಟ್ಟಡ ಕಾಮಗಾರಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಭೂಮಿ ಪೂಜೆ ನೆರವೇರಿಸಿದರು.
ದಿವಂಗತ ವಕೀಲ ಹಾಗೂ ಜಮೀನ್ದಾರರಾದ ರಾಮಚಂದ್ರ ಅವರ ನೆನಪಿಗಾಗಿ ಸುಮಾರು ₹1.20 ಕೋಟಿ ವೆಚ್ಚದಲ್ಲಿ ಈ ಕಟ್ಟಡವನ್ನು ಕಟ್ಟಲಾಗುತ್ತಿದೆ.
‘ರಾಮಚಂದ್ರ ಅವರ ಪತ್ನಿ ಸುಶೀಲಾ ದೇವಿ ಅವರು ₹1.20 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಸೌಕರ್ಯಗಳ ಒಳಗೊಂಡ ಡಯಾಲಿಸ್ ಕಟ್ಟಡ ನಿರ್ಮಾಣ ಮಾಡಲು ಮುಂದೆ ಬಂದಿರುವುದು ಶ್ಲಾಘನೀಯ’ ಎಂದರು.
‘ರಾಮಚಂದ್ರಪ್ಪ ಕುಟುಂಬ ಅನೇಕ ಸಮಾಜ ಸೇವೆ ಮುಂದುವರಿಸಿಕೊಂಡು ಬರುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ. ಅವರ ಕುಟುಂಬಕ್ಕೆ ಸರ್ಕಾರದ ಪರವಾಗಿ ಧನ್ಯವಾದ’ ಎಂದರು.
‘ಮುಂದಿನ ದಿನಗಳಲ್ಲಿ ಈ ಆಸ್ಪತ್ರೆಯನ್ನು ಸುಮಾರು ₹30 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದ್ದು, ಅವರು ಅನುದಾನ ನೀಡುವ ಭರವಸೆ ನೀಡಿದ್ದಾರೆ’ ಎಂದರು.