ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಕ್‌ ಚಾಲಕನಿಂದ ವಂಚನೆ ಬೀದಿಗೆ ಬಿದ್ದ ಕಾರ್ಮಿಕರು!

ಊರಿಗೆ ತಲುಪಿಸುವುದಾಗಿ ಹೇಳಿ 1.36 ಲಕ್ಷ
Last Updated 21 ಮೇ 2020, 20:56 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಭೀತಿಯಿಂದ ಅತಂತ್ರರಾಗಿರುವಬಿಹಾರ ಹಾಗೂ ಉತ್ತರ ಪ್ರದೇಶ ಮೂಲದ ಕೂಲಿ ಕಾರ್ಮಿಕರನ್ನು ಅವರ ಊರಿಗೆ ತಲುಪಿಸುವುದಾಗಿ ಹೇಳಿ ₹1.36 ಲಕ್ಷ ವಂಚಿಸಿರುವ ಚಾಲಕನೊಬ್ಬ ಅವರನ್ನು ರಾಜ್ಯದ ಗಡಿಯಲ್ಲಿ ಬೀದಿಪಾಲು ಮಾಡಿ ಪರಾರಿಯಾಗಿದ್ದು, ಆಂಧ್ರ ಗಡಿಯಲ್ಲಿ ಪೊಲೀಸರ ಲಾಠಿ ರುಚಿ ನೋಡಿದ ಬಳಿಕ ಬೆಂಗಳೂರಿಗೆ ಹಿಂತಿರುಗಿದ್ದಾರೆ.

‘ಊರುಗಳಿಗೆ ಬಿಡುವುದಾಗಿ 56 ಕಾರ್ಮಿಕರನ್ನು ಹತ್ತಿಸಿಕೊಂಡ ಲಾರಿ ಚಾಲಕ ಪೊಲೀಸರ ತಪಾಸಣೆ ಇದೆ. ನಡೆದುಕೊಂಡು ಸ್ವಲ್ಪ ಮುಂದೆ ಬನ್ನಿ. ಆಮೇಲೆ ಮತ್ತೆ ಹತ್ತಿಕೊಳ್ಳಿ ಎಂದು ಇಳಿಸಿಹೋದ. ನಾವು ಗಡಿ ದಾಟುವಾಗ ಪೊಲೀಸರು ತಡೆದರು. ಕೆಲವರನ್ನು ಥಳಿಸಿದರು’ ಎಂದು ಬಿಹಾರದ ಕಾರ್ಮಿಕ ರಾಜೇಂದ್ರ ಪ್ರಸಾದ್‌ ತಿಳಿಸಿದರು.

‘ನಾವು, ಕಾರ್ಮಿಕರು ಗೌರಿಬಿದನೂರು ಕಡೆಗೆ ನಡೆದು ಹೋಗುವುದನ್ನು ಗಮನಿಸಿದೆವು. ಗಡಿ ಭಾಗದಿಂದ ಅವರು ಬರುತ್ತಿದ್ದರು. ಆಗಲೇ ಮಧ್ಯಾಹ್ನವಾಗಿತ್ತು. ಯಾರೂ ಊಟ ಮಾಡಿರಲಿಲ್ಲ. ಕಾರ್ಮಿಕರಲ್ಲಿ ಕೆಲವರನ್ನು ಪೊಲೀಸರು ಥಳಿಸಿದ್ದರು. ಊರಿಗೆ ಹೋಗಬೇಕೆಂದು ಅವರು ಹೇಳುತ್ತಿದ್ದರು. ಅವರಿಗೆ ಊಟದ ವ್ಯವಸ್ಥೆ ಮಾಡಿ, ಅಧಿಕಾರಿಗಳೊಂದಿಗೆ
ಮಾತನಾಡಿ ಸಾರಿಗೆ ಸಂಸ್ಥೆ ಬಸ್‌ ನಲ್ಲಿ ಬೆಂಗಳೂರಿಗೆ ಕಳುಹಿಸಿದೆವು’ ಎಂದು ರಾಷ್ಟ್ರ ಸೇವಾ ದಳದ ಅಧ್ಯಕ್ಷ ಆಲಿಬಾಬಾ ಹೇಳಿದರು.

‘ಲಾರಿ ಚಾಲಕ ಉತ್ತರ ಪ್ರದೇಶದವನು. ಅವನ ಮಾತು ನಂಬಿದೆವು. ಗಡಿ ದಾಟಿದರೆ ಊರಿಗೆ ಬಿಡುವುದಾಗಿ ಸಂಜೆವರೆಗೂ ಹೇಳುತ್ತಿದ್ದ.ಈಗ ಆತ ದೂರವಾಣಿ ಸಂಪರ್ಕವನ್ನು ಸ್ಥಗಿತಗೊಳಿಸಿದ್ದಾನೆ. ನಮ್ಮ ಕರೆಗಳಿಗೆ ಉತ್ತರಿಸುತ್ತಿಲ್ಲ’ ಎಂದು ರಾಜೇಂದ್ರ ಪ್ರಸಾದ್‌ ಅಲವತ್ತುಕೊಂಡರು.

‘ಮೇಖ್ರಿ ವೃತ್ತದಿಂದ ರಾತ್ರಿಯಿಡೀ ನಡೆದುಕೊಂಡೇ ವೈಟ್‌ಫೀಲ್ಡ್‌ಗೆ ಬಂದಿರುವ ಕಾರ್ಮಿಕರು ಪೊಲೀಸ್‌ ಠಾಣೆ ಬಳಿ ಕುಳಿತಿದ್ದಾರೆ. ಇವರಲ್ಲಿ 10 ಮಂದಿ ಟ್ರೈನ್‌ ಟಿಕೆಟ್‌ ಕಾದಿರಿಸಿಕೊಂಡು ಊರಿಗೆ ಹೋಗಿದ್ದಾರೆ. ಉಳಿದವರಿಗೆ ಊಟವಿಲ್ಲ. ಮಲಗಲು ಜಾಗವಿಲ್ಲ. ಈ ಸುದ್ದಿ ತಿಳಿದ ವೈಟ್‌ಫೀಲ್ಡ್‌ ರೈಸಿಂಗ್‌ ಸಂಘಟನೆ ಸದಸ್ಯರು ಊಟದ ವ್ಯವಸ್ಥೆ ಮಾಡಿದರು.

‘ಕಾರ್ಮಿಕರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲು ಕಾರ್ಮಿಕ ಇಲಾಖೆಗೆ ಕರೆ ಮಾಡಿದರೂ ಪ್ರಯೋಜನ ಆಗಿಲ್ಲ’ ಎಂದು ಸಂಘಟನೆಯ ಸದಸ್ಯರೊಬ್ಬರು ತಿಳಿಸಿದರು.

‘ಕೆಲವರು ಈ ಗುಂಪಿನಿಂದ ಬೇರ್ಪಟ್ಟು ದುಡಿಮೆಗಾಗಿ ಚಂದಾಪುರ ಮತ್ತು ಅತ್ತಿಬೆಲೆ ಕಡೆಗೆ ಹೋಗಿದ್ದಾರೆ. ರೈಲ್ವೆ ಟಿಕೆಟ್‌ಗೆ ಬೇಕಾದ ಹಣ ಹೊಂದಿಸುವ ಉದ್ದೇಶದಿಂದ ನಡೆದುಕೊಂಡೇ ಹೋಗಿದ್ದಾರೆ. ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ವಿಫಲವಾಗಿದೆ. ಇನ್ನಾದರೂ ಸರ್ಕಾರ ಗಮನ ಹರಿಸದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ’ ಎಂದು ಆಲಿಬಾಬಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT