ಬೆಂಗಳೂರು: ಗಾಂಜಾ ಹಾಗೂಎಂಡಿಎಂಎ ಮಾರುತ್ತಿದ್ದ ಕೇರಳದ ಮೂವರು ಆರೋಪಿಗಳನ್ನು ಜೆ.ಸಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾಡುಗೋಡಿ ನಿವಾಸಿ ಜಿಂಡೋಜೇಮ್ಸ್ (29), ಅತ್ತಿಬೆಲೆಯ ಆದರ್ಶ (27) ಹಾಗೂ ಇನ್ಮೇಶ್ (32) ಬಂಧಿತರು.
ಜೆ.ಸಿ.ನಗರ ಠಾಣಾ ವ್ಯಾಪ್ತಿಯ ಬೋರ್ ಬಂಕ್ ರಸ್ತೆಯಲ್ಲಿ ಸಾರ್ವಜನಿಕರಿಗೆ ಮಾದಕ ವಸ್ತುಗಳನ್ನು ಮಾರುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ. ಇವರಿಂದ ₹25 ಲಕ್ಷ ಮೌಲ್ಯದ 45 ಕೆ.ಜಿ ಗಾಂಜಾ, 70 ಗ್ರಾಂ ಎಂಡಿಎಂಎ, ಒಂದು ಸಾವಿರ ನಗದು, ಕೃತ್ಯಕ್ಕೆ ಬಳಸುತ್ತಿದ್ದ ಕಾರು ವಶಕ್ಕೆ ಪಡೆದಿದ್ದಾರೆ.
ಜಾಲಹಳ್ಳಿ ಠಾಣೆಯ ವ್ಯಾಪ್ತಿಯ ಗಾಂಜಾ ಮಾರಾಟ ಪ್ರಕರಣದಲ್ಲಿ ಜೈಲಿನಲ್ಲಿರುವ ಲೂಬಿನ್ ಅಮಲ್ ನಾಥ್ ಎಂಬುವನಿಂದ ಆರೋಪಿಗಳು ಈ ಹಿಂದೆ ಗಾಂಜಾ ಖರೀದಿಸಿ, ಸೇವನೆ ಮಾಡುತ್ತಿದ್ದರು.
ಅಮಲ್ ನಾಥ್ನಿಂದ ಗಾಂಜಾ ಮಾರುವ ಮಾಹಿತಿ ಪಡೆದಿದ್ದ ಆರೋಪಿಗಳು, ವ್ಯಕ್ತಿಯೊಬ್ಬರಿಂದ ವಿಶಾಖಪಟ್ಟಣ ಹಾಗೂ ಆಂಧ್ರಪ್ರದೇಶದ ಗಡಿ ಭಾಗಗಳಿಂದ ಕಾರು, ಟ್ರಕ್ ಹಾಗೂ ಲಾರಿಗಳಲ್ಲಿ ಗಾಂಜಾ ತರಿಸಿಕೊಂಡು, ಅತ್ತಿಬೆಲೆಯಲ್ಲಿ ತಾವು ವಾಸವಿರುವ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.