ಬೆಂಗಳೂರು: ಡ್ರಗ್ಸ್ ಸಾಗಣೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿ ವಿಶ್ವಾಸ್ ಎಂಬಾತ, ತನ್ನ ಪತ್ನಿ ಹಾಗೂ ಸಹಚರರ ಮೂಲಕ ಗಾಂಜಾ ಮಾರಾಟ ಮಾಡಿಸುತ್ತಿದ್ದ ಸಂಗತಿ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.
‘ಗಾಂಜಾ ಮಾರಾಟ ಸಂಬಂಧ ಜಿಗಣಿಯ ಮಿಸ್ಬಾ (21) ಹಾಗೂ ಬೆಟ್ಟದಾಸಪುರದ ಜಿ. ರಾಘವೇಂದ್ರ (26) ಎಂಬುವರನ್ನು ಬಂಧಿಸಲಾಗಿದೆ. ಅವರಿಂದ ₹ 15 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಬಂಡೇಪಾಳ್ಯ ಪೊಲೀಸರು ಹೇಳಿದರು.
‘160 ಕೆ.ಜಿ ಗಾಂಜಾ ಸಮೇತ ಸಿಕ್ಕಿಬಿದ್ದಿದ್ದ ವಿಶ್ವಾಸ್ನನ್ನು ಕೆಲ ದಿನಗಳ ಹಿಂದಷ್ಟೇ ಬಂಧಿಸಲಾಗಿತ್ತು. ಸದ್ಯ ಆತ, ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾನೆ. ಅಲ್ಲಿದ್ದುಕೊಂಡೇ ಆರೋಪಿ, ಪತ್ನಿ ಹಾಗೂ ಸಹಚರರ ಮೂಲಕ ಗಾಂಜಾ ಮಾರಾಟ ಮಾಡಿಸುತ್ತಿದ್ದ’ ಎಂದೂ ತಿಳಿಸಿದರು.
‘ಹುಲಿಮಂಗಲ ಗ್ರಾಮದಲ್ಲಿ ಬಾಡಿಗೆ ಮನೆ ಮಾಡಿದ್ದ ಮಿಸ್ಬಾ, ಅಲ್ಲಿಯೇ ಗಾಂಜಾ ಸಂಗ್ರಹಿಸಿದ್ದಳು. ರಾಘವೇಂದ್ರ ಮೂಲಕ ಕೆಲ ಕಾಲೇಜು ವಿದ್ಯಾರ್ಥಿಗಳು ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಮಾರಾಟ ಮಾಡಿಸುತ್ತಿದ್ದಳು. ಮನೆ ಮೇಲೆ ದಾಳಿ ನಡೆಸಿದಾಗ ಅಲ್ಮೇರಾದಲ್ಲಿ ಗಾಂಜಾ ಪತ್ತೆಯಾಯಿತು’ ಎಂದೂ ಹೇಳಿದರು.