ಬೆಂಗಳೂರು: ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಬಳಗ ಪ್ರಸ್ತುತಪಡಿಸುವ ಕರ್ನಾಟಕದ ಪ್ರತಿಷ್ಠಿತ ಶೈಕ್ಷಣಿಕ ಮೇಳ ‘ಎಡ್ಯುವರ್ಸ್’ ಏಪ್ರಿಲ್ 6 ಮತ್ತು 7ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ನಗರದ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ (ಗೇಟ್ 2/3) ಎರಡೂ ದಿನ ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಮೇಳ ನಡೆಯಲಿದ್ದು, ಎಲ್ಲರಿಗೂ ಮುಕ್ತ ಆಹ್ವಾನವಿದೆ.
ಚಲನಚಿತ್ರ ನಟ ವಿಜಯರಾಘವೇಂದ್ರ ಶೈಕ್ಷಣಿಕ ಮೇಳವನ್ನು ಉದ್ಘಾಟಿಸಲಿದ್ದಾರೆ. ಎರಡೂ ದಿನ ಸಿಇಟಿ ಹಾಗೂ ಕಾಮೆಡ್–ಕೆ ಕುರಿತು ವಿಶೇಷ ಗೋಷ್ಠಿಗಳು ನಡೆಯಲಿವೆ. ಏಪ್ರಿಲ್ 13 ಮತ್ತು 14ರಂದು ಹುಬ್ಬಳ್ಳಿಯಲ್ಲಿಯೂ ಈ ಮೇಳವನ್ನೂ ಆಯೋಜಿಸಲಾಗಿದೆ.
ಹದಿಮೂರು ವರ್ಷಗಳಿಂದ ಈ ಶೈಕ್ಷಣಿಕ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದೆ. ಈ ಮೇಳದಲ್ಲಿ ಶಿಕ್ಷಣ ಕ್ಷೇತ್ರದ ಹಲವು ಪರಿಣತರು, ತಜ್ಞರು ಪಾಲ್ಗೊಳ್ಳುತ್ತಿದ್ದಾರೆ. ಪರಿಣತರೊಂದಿಗೆ ಸಂವಾದ, ಉಪನ್ಯಾಸ ಮತ್ತು ಚರ್ಚೆಗಳನ್ನು ಆಯೋಜಿಸಲಾಗುತ್ತದೆ.
50ಕ್ಕೂ ಹೆಚ್ಚಿನ ಶಿಕ್ಷಣ ಸಂಸ್ಥೆಗಳು ಈ ಮೇಳದಲ್ಲಿ ಪಾಲ್ಗೊಳ್ಳಲಿವೆ. ಪಿಯುಸಿ ನಂತರ ಮುಂದೇನು ಎಂಬ ಪ್ರಶ್ನೆಗೆ ಮೇಳದಲ್ಲಿ ಪರಿಹಾರ ಪಡೆಯಬಹುದಾಗಿದೆ. ಜೊತೆಗೆ, ಪಿಯುಸಿ ಅಥವಾ ತತ್ಸಮಾನ ವಿದ್ಯಾಭ್ಯಾಸ ಮುಗಿಸಿದ ವಿದ್ಯಾರ್ಥಿಗಳಿಗೆ ವೃತ್ತಿಪರ ಕೋರ್ಸುಗಳಿಗೆ ಸಂಬಂಧಿಸಿದಂತೆ ವಿವರವಾದ ಮಾಹಿತಿ ದೊರೆಯಲಿದೆ. ರಾಜ್ಯದಲ್ಲಿರುವ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಸಿಬ್ಬಂದಿ ತಮ್ಮಲ್ಲಿರುವ ವಿಶೇಷ ಕೋರ್ಸ್ಗಳ, ಪದವಿಗಳ ಮಾಹಿತಿ ನೀಡಲಿದ್ದಾರೆ. ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ, ಪಾಲಕರಿಗೂ ಸಹ ಮಾರ್ಗದರ್ಶಿಯಾಗಿರಲಿದೆ. ಶಿಕ್ಷಣ ಸಾಲದ ಕುರಿತೂ ಮಾಹಿತಿ ಪಡೆಯಬಹುದಾಗಿದೆ.
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸುವ ವಿಶೇಷ ಉಪನ್ಯಾಸಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಸಿಇಟಿ ಮತ್ತು ಕಾಮೆಡ್–ಕೆಗೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನೂ ಸಮಗ್ರವಾಗಿ ನೀಡಲಾಗುತ್ತದೆ. Ad6 Advertising ಬೆಂಬಲಿಸುತ್ತಿರುವ ಈ ಮೇಳಕ್ಕೆ ‘ನ್ಯೂಸ್ ಫಸ್ಟ್’ ಕನ್ನಡ ಟೆಲಿವಿಷನ್ ಸಹಭಾಗಿತ್ವವಿದೆ.
ಸಿಇಟಿ ಮತ್ತು ಕಾಮೆಡ್–ಕೆ ಪರೀಕ್ಷಾರ್ಥಿಗಳಿಗೆ ಎರಡೂ ದಿನ ಅಣಕು ಪರೀಕ್ಷೆ ಹಮ್ಮಿಕೊಳ್ಳಲಾಗುವುದು. ಈ ಅಣಕು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಒಂದು ಲಕ್ಷ ಮೌಲ್ಯದ ಬಹುಮಾನಗಳನ್ನು ಗೆಲ್ಲುವ ಅವಕಾಶಗಳಿವೆ.
ಆಸಕ್ತ ವಿದ್ಯಾರ್ಥಿಗಳು www.deccanherald.com/eduverse ಜಾಲತಾಣಕ್ಕೆ ಲಾಗಿನ್ ಆಗಿ, ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ, ನಿಮ್ಮ ಸ್ಥಳವನ್ನು ಕಾಯ್ದಿರಿಸಿಕೊಳ್ಳಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.