ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಮುಂದಾಗಿದ್ದ ಬಿಬಿಎಂಪಿ ಅಧಿಕಾರಿಗಳು ಮತ್ತು ಸ್ಥಳೀಯರ ನಡುವೆ ಶನಿವಾರ ಮಾತಿನ ಚಕಮಕಿ ನಡೆಯಿತು.
ಈದ್ಗಾ ಮೈದಾನದ ಆಸ್ತಿ ಮಾಲೀಕತ್ವ ವಿವಾದ ಭುಗಿಲೆದ್ದಿರುವ ಬೆನ್ನಲ್ಲೇ ಪೊಲೀಸರ ಮನವಿ ಮೇರೆಗೆ ಮೈದಾನದ ಸುತ್ತ 12 ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ಬಿಬಿಎಂಪಿ ಮುಂದಾಗಿತ್ತು. ಕಾಮಗಾರಿ ನಡೆಯುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಸ್ಥಳಕ್ಕೆ ಬಂದು ವಿರೋಧ ವ್ಯಕ್ತಪಡಿಸಿದರು.
‘ಪೊಲೀಸರ ಮನವಿ ಮೇರೆಗೆ ಅಳವಡಿಕೆ ಮಾಡಲಾಗುತ್ತಿದೆ’ ಎಂದು ಸಮಜಾಯಿಷಿ ನೀಡಿದ ಪಾಲಿಕೆ ಸಹಾಯಕ ಎಂಜಿನಿಯರ್ ಉಮೇಶ್ ಅವರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು, ‘ಇಷ್ಟು ದಿನ ಇಲ್ಲದ ಸಿಸಿಟಿವಿ ಕ್ಯಾಮೆರಾಗಳನ್ನು ಈಗ ಅಳವಡಿಕೆ ಮಾಡವುದರ ಉದ್ದೇಶ ಏನು’ ಎಂದು ಪ್ರಶ್ನಿಸಿದರು.
‘ಬಿಬಿಎಂಪಿ ಆಟದ ಮೈದಾನದಲ್ಲಿ ಬೇರೆ ಕಾರ್ಯಕ್ರಮಗಳಿಗೂ ಅವಕಾಶ ನೀಡಲು ಕೋರಿದ ಕೂಡಲೇ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತಿದೆ. ಬಿಬಿಎಂಪಿ ಮತ್ತು ಪೊಲೀಸರು ಮುಸ್ಲಿಮರ ಪರವಾಗಿ ಕೆಲಸ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಬಲ್ ಅಳವಡಿಕೆಗೆ ಗುಂಡಿ ತೆಗೆಯುತ್ತಿದ್ದ ಜೆಸಿಬಿ ಕೆಲಸಕ್ಕೆ ಅಡ್ಡಿಪಡಿಸಿದರು. ಇದನ್ನು ತಡೆದ ಪೊಲೀಸರ ವಿರುದ್ಧವೂ ಸ್ಥಳೀಯರು ಮಾತಿನ ಚಕಮಕಿಗೆ ಇಳಿದರು.
‘ಸಿಸಿಟಿವಿ ಅಳವಡಿಕೆ ಮಾಡಲು ಬಿಬಿಎಂಪಿಯಿಂದ ಕಾಮಗಾರಿಗೆ ಕಾರ್ಯಾದೇಶ ನೀಡಲಾಗಿದೆಯೇ’ ಎಂದು ಪ್ರಶ್ನಿಸಿದರು. ಕಾರ್ಯಾದೇಶ ಇಲ್ಲದೆ ಕಾಮಗಾರಿ ನಿರ್ವಹಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಕಾಮಗಾರಿ ಸ್ಥಗಿತಗೊಳಿಸಿ ಸ್ಥಳೀಯರನ್ನು ಪೊಲೀಸರು ಸಮಾಧಾನಪಡಿಸಿದರು.