‘ಹಲವು ಬಾರಿ ಸೋಲು, ಗೆಲುವಿನ ನಿರ್ಧಾರ ಒಂದು ಮತವನ್ನು ಅವಲಂಬಿಸಿರುತ್ತದೆ. ಚುನಾವಣೆ ಅರ್ಥಪೂರ್ಣಗೊಳಿಸಲು ಪ್ರತಿಯೊಂದು ಮತವೂ ನಿರ್ಣಾಯಕವಾಗಿರುತ್ತದೆ. ಎಚ್ಚರಿಕೆಯ ಹಾಗೂ ಜಾಗೃತ ಮತದಾರರು ಚುನಾವಣೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಮತದಾನ ಹಕ್ಕಲ್ಲ, ಕರ್ತವ್ಯ ಎಂದು ತಿಳಿದಾಗ ಪ್ರಜಾಪ್ರಭುತ್ವ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಸರ್ಕಾರವೂ ಜನರ ಆಶಯ, ಆಶೋತ್ತರಗಳಿಗೆ ಅನುಗುಣವಾಗಿ ಸರ್ಕಾರ ಕಾರ್ಯನಿರ್ವಹಿಸುತ್ತದೆ. ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಮತದಾನದ ಹಕ್ಕು ನೀಡಲಾಗಿದ್ದರೂ, 18ರಿಂದ 24 ವರ್ಷದ ಒಳಗಿನವರು ಮತದಾನದಲ್ಲಿ ಹೆಚ್ಚು ಆಸಕ್ತಿ ವಹಿಸದೇ ಇರುವುದು ಬೇಸರದ ಸಂಗತಿ. ಚುನಾವಣಾ ಆಯೋಗ ಅರ್ಹ ಮತದಾರರ ಹೆಸರುಗಳು ಬಿಟ್ಟು ಹೋಗದಂತೆ ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ’ ಎಂದರು.