ಬೆಂಗಳೂರು: ಮಾಜಿ ಸೇನಾಧಿಕಾರಿಯೊಬ್ಬರ ಮಗನನ್ನು ಅಪಹರಿಸಿ ₹ 25 ಸಾವಿರ ನಗದು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಆರೋಪಿಗಳಾದ ಮುಬಾರಕ್ ಹಾಗೂ ಸುಂದರ್ ಬಂಧಿತರು. ಇವರಿಬ್ಬರೂ ಸೇರಿಕೊಂಡು ಸಾಹೀಲ್ ಸಲೀಂ ಎಂಬುವವರನ್ನು ಅಪಹರಿಸಿದ್ದರು. ಸಾಹೀಲ್ ನೀಡಿದ್ದ ದೂರು ಆಧರಿಸಿ, ಇಬ್ಬರನ್ನೂ ಸೆರೆಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಕೇರಳದ ಮಾಜಿ ಸೇನಾಧಿಕಾರಿಯೊಬ್ಬರ ಮಗನಾದ ಸಾಹೀಲ್, ನಗರದ ಕಾಲೇಜೊಂದರಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಪೇಯಿಂಗ್ ಗೆಸ್ಟ್ (ಪಿ.ಜಿ) ಕಟ್ಟಡದಲ್ಲಿ ನೆಲೆಸಿದ್ದರು. ಪಿಯುಸಿ ಸ್ನೇಹಿತರಾಗಿದ್ದ ಮುಬಾರಕ್ ಹಾಗೂ ಸುಂದರ್, ಆಗಾಗ ಸಾಹೀಲ್ ಅವರನ್ನು ಭೇಟಿಯಾಗುತ್ತಿದ್ದರು. ಸಾಹೀಲ್ ಬಳಿ ಹೆಚ್ಚು ಹಣವಿರುವುದನ್ನು ಆರೋಪಿಗಳು ಗಮನಿಸಿದ್ದರು’ ಎಂದು ತಿಳಿಸಿದರು.
‘ಸಾಹೀಲ್ ಅವರನ್ನು ಊಟಕ್ಕೆಂದು ತಿರುಮೇನಹಳ್ಳಿಗೆ ಕರೆದೊಯ್ದಿದ್ದ ಆರೋಪಿಗಳು, ಅಲ್ಲಿಂದ ಅಪಹರಣ ಮಾಡಿದ್ದರು. ಶೆಡ್ವೊಂದರಲ್ಲಿ ಕೂಡಿ ಹಾಕಿದ್ದರು. ₹ 25 ಸಾವಿರ ಕಿತ್ತುಕೊಂಡು ಬಿಟ್ಟು ಕಳುಹಿಸಿದ್ದರು.’
‘ಹೆದರಿದ್ದ ಸಾಹೀಲ್, ಬೆಂಗಳೂರು ತೊರೆದು ಕೇರಳಕ್ಕೆ ಹೋಗಿದ್ದ. ವಾಪಸು ಕಾಲೇಜಿಗೆ ಹೋಗುವುದಿಲ್ಲವೆಂದು ಪಟ್ಟು ಹಿಡಿದಿದ್ದ. ಏಕೆ ? ಎಂದು ತಂದೆ ಪ್ರಶ್ನಿಸಿದಾಗ, ಅಪಹರಣ ಸಂಗತಿ ತಿಳಿಸಿದ್ದ. ನಂತರ, ತಂದೆಯೇ ಮಗನನ್ನು ಠಾಣೆಗೆ ಕರೆತಂದು ದೂರು ಕೊಡಿಸಿದ್ದರು’ ಎಂದು ಹೇಳಿದರು.