ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಒಂದು ದೇಶ–ಒಂದು ಚುನಾವಣೆ’ ಬಗ್ಗೆ ತಜ್ಞರ ಅಭಿಪ್ರಾಯ

ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣ
Last Updated 7 ಮಾರ್ಚ್ 2021, 20:55 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತವನ್ನು ಭ್ರಷ್ಟಾಚಾರ ಮುಕ್ತ ರಾಷ್ಟ್ರವನ್ನಾಗಿ ರೂಪಿಸಲು ‘ಒಂದು ದೇಶ–ಒಂದು ಚುನಾವಣೆ’ ಪರಿಕಲ್ಪನೆ ಸಹಕಾರಿ. ಇದು ಪ್ರಜಾಪ್ರಭುತ್ವಕ್ಕೆ ಮಾರಕವಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಅನುಕೂಲಕರ’ ಎಂದು ತಜ್ಞರು ಅಭಿಪ್ರಾಯಪಟ್ಟರು.

ಕರ್ನಾಟಕ ಬಿಜೆಪಿ ವೃತ್ತಿಪರರ ಪ್ರಕೋಷ್ಠವು ಭಾನುವಾರ ಹಮ್ಮಿಕೊಂಡಿದ್ದ ‘ಒಂದು ದೇಶ–ಒಂದು ಚುನಾವಣೆ’ ಸಂವಾದ ಕಾರ್ಯಕ್ರಮದಲ್ಲಿ ಸಂಸದ ತೇಜಸ್ವಿ ಸೂರ್ಯ, ಮಾಜಿ ಅಡ್ವೊಕೇಟ್‌ ಜನರಲ್‌ ಅಶೋಕ ಹಾರನಹಳ್ಳಿ ಹಾಗೂಸ್ವರಾಜ್ಯದ ಸಂಪಾದಕೀಯ ವಿಭಾಗದ ನಿರ್ದೇಶಕ ಆರ್.ಜಗನ್ನಾಥನ್ ಮಾತನಾಡಿದರು.

ಅಶೋಕ ಹಾರನಹಳ್ಳಿ, ‘ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆ ತರಬೇಕಾದ ಅಗತ್ಯವಿದೆ. ಇದು ಅನೇಕ ವರ್ಷಗಳಿಂದ ಚರ್ಚೆಯಾಗಿ ಜಾರಿಯಾಗದೆ ಉಳಿದಿರುವ ಪರಿಕಲ್ಪನೆ. ದೇಶದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಅವರು ಬಹಳ ಧೈರ್ಯದಿಂದ ಇದನ್ನು ಎಲ್ಲರ ಮುಂದಿಟ್ಟಿದ್ದಾರೆ. ಇದರ ಬಗ್ಗೆ ಚರ್ಚೆಗಳು ಆಗಬೇಕು. ವಸ್ತುನಿಷ್ಠ ವಿಶ್ಲೇಷಣೆಯಿಂದ ಮಾತ್ರ ಇದರ ಅನುಕೂಲ ಹಾಗೂ ಅನನುಕೂಲದ ಬಗ್ಗೆ ಅರಿತುಕೊಳ್ಳಲು ಸಾಧ್ಯ’ ಎಂದರು.

‘1983ರಲ್ಲಿ ಚುನಾವಣಾ ಆಯೋಗವೇ ಈ ಪರಿಕಲ್ಪನೆಯ ಅನುಷ್ಠಾನದ ಬಗ್ಗೆ ಆಲೋಚಿಸಿತ್ತು. ವರ್ಷಪೂರ್ತಿ ಚುನಾವಣೆಗಳೇ ನಡೆಯುತ್ತಿದ್ದರೆ ಸರ್ಕಾರದ ಆಡಳಿತ ಯಂತ್ರ ಕುಸಿಯುತ್ತದೆ. ‘ಒಂದು ದೇಶ–ಒಂದು ಚುನಾವಣೆ’ ಜಾರಿಗೊಂಡರೆ ಇದನ್ನು ತಪ್ಪಿಸಬಹುದು. ಜೊತೆಗೆ ಭ್ರಷ್ಟಾಚಾರಕ್ಕೂ ಕಡಿವಾಣ ಹಾಕಬಹುದು. ಇದಕ್ಕಾಗಿ ಸಂವಿಧಾನದ ಮೂಲ ಸ್ವರೂಪದಲ್ಲಿ ಬದಲಾವಣೆ ಮಾಡಲು ಅವಕಾಶವಿಲ್ಲ. ಆದರೆ ಕೆಲವು ಸಂದರ್ಭಗಳಲ್ಲಿ ರಾಜ್ಯಗಳ ಒಪ್ಪಿಗೆ ಪಡೆದು ತಿದ್ದುಪಡಿ ತರಲು ಅವಕಾಶವಿದೆ’ ಎಂದು ನುಡಿದರು.

ಸಂಸದ ತೇಜಸ್ವಿ ಸೂರ್ಯ, ‘ಈ ಪರಿಕಲ್ಪನೆ ಜಾರಿಗೊಂಡರೆ ವಂಶಾಡಳಿತವು ಕೊನೆಗೊಳ್ಳಲಿದೆ. ಹೀಗಾಗಿ ಕೆಲವರು ಇದನ್ನು ವಿರೋಧಿಸುತ್ತಿದ್ದಾರೆ. ಈಗಿನ ವ್ಯವಸ್ಥೆಯಲ್ಲಿ ಹಣವಂತರಷ್ಟೇ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಸಾಮಾನ್ಯ ಕಾರ್ಯಕರ್ತರು ಹಣ ಹಂಚಿ ಚುನಾವಣೆ ಎದುರಿಸಲು ಸಾಧ್ಯವಿಲ್ಲ. ಈ ವ್ಯವಸ್ಥೆ ಬದಲಾಗಬೇಕಾದರೆ ‘ಒಂದು ದೇಶ–ಒಂದು ಚುನಾವಣೆ’ ಜಾರಿಗೊಳ್ಳುವುದು ಅವಶ್ಯ’ ಎಂದು ತಿಳಿಸಿದರು.

‘ಇದು ಆರ್‌ಎಸ್‌ಎಸ್‌ ಅಜೆಂಡಾ ಎಂದು ವಿರೋಧ ಪಕ್ಷಗಳು ಟೀಕಿಸುತ್ತಿವೆ. ಅವರ ಮಾತುಗಳಲ್ಲಿ ಯಾವುದೇ ಹುರುಳಿಲ್ಲ’ ಎಂದರು.

‘ಆರು ತಿಂಗಳು ಹಾಗೂ ವರ್ಷಕ್ಕೊಮ್ಮೆ ಚುನಾವಣೆ ನಡೆಸುವುದರಿಂದ ಸಮಯ, ಹಣ ಹಾಗೂ ಮಾನವ ಸಂಪನ್ಮೂಲ ವ್ಯರ್ಥವಾಗುತ್ತದೆ. ‘ಒಂದು ದೇಶ–ಒಂದು ಚುನಾವಣೆ’ ಅನುಷ್ಠಾನದಿಂದ ಆಡಳಿತವನ್ನು ಸುಗಮಗೊಳಿಸಬಹುದು’ ಎಂದು ಜಗನ್ನಾಥನ್‌
ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT