ಬೆಂಗಳೂರು: ಉಜಿರೆಯ ಎಸ್ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾಗಿವೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಆರೋಪಿಸಿದೆ.
ಪ್ರಕರಣದ ಆರೋಪಿ ಎಂದು ಸಂತೋಷ್ ರಾವ್ ಎಂಬವರನ್ನು ಬಂಧಿಸಲಾಗಿತ್ತು. ಪ್ರಭಾವಿಗಳನ್ನು ರಕ್ಷಿಸುವುದಕ್ಕಾಗಿ ನಿರಪರಾಧಿಯನ್ನು ಬಲಿಕೊಡಲಾಗುತ್ತಿದೆ ಎಂದು ಆಗಲೇ ಜನವಾದಿ ಮಹಿಳಾ ಸಂಘಟನೆಯೂ ಸೇರಿದಂತೆ ಹಲವು ಸಂಘಟನೆಗಳ ಪದಾಧಿಕಾರಿಗಳು ಹೇಳಿದ್ದರು. ಇದೀಗ ಸಿಬಿಐ ಕೋರ್ಟ್ ಸಂತೋಷ್ ರಾವ್ರನ್ನು ಆರೋಪ ಮುಕ್ತಗೊಳಿಸಿರುವುದು ಸ್ವಾಗತಾರ್ಹ. ಆದರೆ, ಈ ಪ್ರಕರಣದ ನೈಜ ಆರೋಪಿಗಳನ್ನು ಪತ್ತೆ ಹಚ್ಚುವವರೆಗೆ ತನಿಖೆ ಮುಂದುವರಿಸಬೇಕು ಎಂದು ಸಂಘಟನೆಯ ಅಧ್ಯಕ್ಷರಾದ ಮೀನಾಕ್ಷಿ ಬಾಳಿ, ಪ್ರಧಾನ ಕಾರ್ಯದರ್ಶಿ ದೇವಿ ಆಗ್ರಹಿಸಿದ್ದಾರೆ.