ಬೆಂಗಳೂರು: ಕಬ್ಬನ್ ಉದ್ಯಾನದಲ್ಲಿ ಶನಿವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, 20ಕ್ಕೂ ಹೆಚ್ಚು ಬಿದಿರು ಸೇರಿ ಕಲ ಗಿಡಗಳು ಸುಟ್ಟಿವೆ.
ವೆಂಕಟಪ್ಪ ಆರ್ಟ್ ಗ್ಯಾಲರಿಗೆ ಹೊಂದಿಕೊಂಡಿರುವ ಉದ್ಯಾನದ ಜಾಗದಲ್ಲಿದ್ದ ಬಿದಿರಿನಲ್ಲಿ ರಾತ್ರಿ 8.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಅದರ ಕೆನ್ನಾಲಗೆ ಹೆಚ್ಚಾಗಿ ಅಕ್ಕ–ಪಕ್ಕದ ಬಿದಿರು ಹಾಗೂ ಗಿಡಗಳಿಗೂ ಬೆಂಕಿ ಹೊತ್ತಿಕೊಂಡಿತ್ತು.
ಸ್ಥಳಕ್ಕೆ ಬಂದ ಹೈಗ್ರೌಂಡ್ಸ್ ಹಾಗೂ ಮೆಯೋಹಾಲ್ ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ವಾಹನಗಳ ಮೂಲಕ ಒಂದು ಗಂಟೆಯವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಘಟನೆ ಯಿಂದಾಗಿಕಸ್ತೂರ್ ಬಾ ರಸ್ತೆಯ ಒಂದು ಬದಿಯಲ್ಲಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಇದರಿಂದ ದಟ್ಟಣೆಯೂ ಉಂಟಾಯಿತು.
ಬೆಂಕಿ ಹೊತ್ತಿಕೊಂಡಿದ್ದ ಜಾಗದ ಸಮೀಪದಲ್ಲೇ ವೆಂಕಟಪ್ಪ ಆರ್ಟ್ ಗ್ಯಾಲರಿ ಹಾಗೂ ವಿಶ್ವೇಶ್ವರಯ್ಯ ಮ್ಯೂಸಿಯಂ ಕಟ್ಟಡಗಳಿವೆ. ಅವುಗಳಿಗೂ ಬೆಂಕಿ ತಗಲುವ ಆತಂಕವಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ ತ್ವರಿತವಾಗಿ ಬೆಂಕಿ ನಂದಿಸಿ, ಆತಂಕ ದೂರ ಮಾಡಿದರು.
‘ಕಿಡಿಕೇಡಿಗಳು ಬೆಂಕಿ ಹಚ್ಚಿರುವ ಅನುಮಾನವಿದೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ’ ಎಂದು ಅಗ್ನಿಶಾಮಕ ದಳದ ಪೊಲೀಸರು ಹೇಳಿದರು.