ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು | ಬೆಂಕಿ: ನಾಲ್ಕು ಬೈಕ್‌ಗಳು ಭಸ್ಮ

Published 3 ಏಪ್ರಿಲ್ 2024, 15:50 IST
Last Updated 3 ಏಪ್ರಿಲ್ 2024, 15:50 IST
ಅಕ್ಷರ ಗಾತ್ರ

ಬೆಂಗಳೂರು: ಜೆ.ಪಿ.ನಗರ ಪೊಲೀಸ್‌ ಠಾಣಾ ವ್ಯಾಪ್ತಿಯ ಸಾರಕ್ಕಿಯ ಚಾಮುಂಡಿಪುರದಲ್ಲಿ ಮನೆ ಎದುರು ನಿಲ್ಲಿಸಿದ್ದ ನಾಲ್ಕು ಬೈಕ್‌ಗಳು ಬೆಂಕಿಗೆ ಆಹುತಿಯಾಗಿವೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ.

ರಾತ್ರಿ ಕೆಲಸ ಮುಗಿಸಿಕೊಂಡು ಬಂದ ವಿಜಯ್‌ ಸೇರಿದಂತೆ ನಾಲ್ವರು ಅಕ್ಕಪಕ್ಕದಲ್ಲಿ ಬೈಕ್‌ಗಳನ್ನು ನಿಲ್ಲಿಸಿದ್ದರು. ಕಿಡಿಗೇಡಿಗಳು ಬೈಕ್‌ಗೆ ಬೆಂಕಿ ಹಚ್ಚಿ ಪರಾರಿ ಆಗಿರುವ ಶಂಕೆ ವ್ಯಕ್ತವಾಗಿದೆ. ಹೊಗೆಯಿಂದ ಎರಡು ಗಿಳಿಗಳು ಸಹ ಮೃತಪಟ್ಟಿವೆ.

‘ರಾತ್ರಿ ಏಕಾಏಕಿ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿ ಹೊರಗೆ ಬಂದು ನೋಡಿದಾಗ ಬೈಕ್‌ಗೆ ಬೆಂಕಿ ಹಚ್ಚಿರುವುದು ತಿಳಿಯಿತು. ಇನ್ನೂ ಕೆಲವು ಬೈಕ್‌ಗಳು ಪಕ್ಕದಲ್ಲಿದ್ದವು. ಅವುಗಳನ್ನು ತಕ್ಷಣವೇ ಬೇರೆಡೆ ಸ್ಥಳಾಂತರ ಮಾಡಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿತು. ಮನೆಯೊಂದರ ಕಿಟಕಿ ತೆರೆದಿದ್ದರಿಂದ ಬೆಂಕಿ ರಭಸಕ್ಕೆ ಮನೆಯಲ್ಲಿದ್ದ ಟೈಲರಿಂಗ್‌ ಮಷಿನ್‌ ಹಾಗೂ ಬಟ್ಟೆಗಳಿಗೂ ಹಾನಿಯಾಗಿದೆ’ ಎಂದು ಬೈಕ್‌ ಮಾಲೀಕರು ತಿಳಿಸಿದ್ದಾರೆ.

‘ಬೈಕ್‌ ನಿಲುಗಡೆ ಮಾಡಿದ್ದ ಸುತ್ತಮುತ್ತ ಯಾವುದೇ ಸಿಸಿ ಟಿ.ವಿ ಕ್ಯಾಮೆರಾ ಇಲ್ಲ. ಸದ್ಯಕ್ಕೆ ಕೃತ್ಯ ಎಸಗಿದವರು ಯಾರು ಎಂದು ಹೇಳಲು ಸಾಧ್ಯವಾಗುತ್ತಿಲ್ಲ. ಆ ಸ್ಥಳದಲ್ಲಿ ಬೈಕ್‌ ನಿಲುಗಡೆ ಮಾಡಿದ್ದ ಮಾಲೀಕರ ನಡುವೆ ವೈಮನಸ್ಸು ಇತ್ತೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ. ಮಾಲೀಕರಿಂದ ಮಾಹಿತಿ ಪಡೆದುಕೊಳ್ಳಲಾಗಿದೆ. ರಾತ್ರಿ 12 ಗಂಟೆ ಸುಮಾರಿಗೆ ಕೊನೆಯ ಬೈಕ್‌ ಅನ್ನು ಅಲ್ಲಿ ನಿಲ್ಲಿಸಲಾಗಿತ್ತು. ಬೇಸಿಗೆ ಕಾರಣಕ್ಕೆ ಏನಾದರೂ ಕಿಡಿ(ಸ್ಪಾರ್ಕ್‌) ಉಂಟಾಗಿ ಬೆಂಕಿ ಹೊತ್ತಿರಬಹುದೇ ಅಥವಾ ಕಿಡಿಗೇಡಿಗಳ ಕೃತ್ಯವೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಬೆಂಕಿಗೆ ಆಹುತಿಯಾದ ಬೈಕ್‌ಗಳನ್ನು ಜನರು ವೀಕ್ಷಿಸಿದರು.
ಬೆಂಕಿಗೆ ಆಹುತಿಯಾದ ಬೈಕ್‌ಗಳನ್ನು ಜನರು ವೀಕ್ಷಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT