ಬೆಂಗಳೂರು: ‘ಫೋಕಸ್ ಸುದ್ದಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಹೇಮಂತ್ಕುಮಾರ್ ಹಾಗೂ ಸಚಿವರೊಬ್ಬರ ಆಪ್ತನೆಂದು ಹೇಳಿಕೊಂಡಿದ್ದ ಪುಷ್ಪನಾಥ್ ಎಂಬುವರು ₹ 20 ಲಕ್ಷ ಪಡೆದುಕೊಂಡು ವಂಚಿಸಿದ್ದಾರೆ’ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಬಿ.ಪಿ. ಮಂಜೇಗೌಡ ಅವರು ವಿಜಯನಗರ ಠಾಣೆಗೆ ದೂರು ನೀಡಿದ್ದಾರೆ.
ಶಾಸಕ ಅರವಿಂದ ಲಿಂಬಾವಳಿ ಅವರನ್ನು ಬ್ಲ್ಯಾಕ್ಮೇಲ್ ಮಾಡಿ ₹ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಆರೋಪದಡಿ ಸಿಸಿಬಿ ಪೊಲೀಸರು ಹೇಮಂತ್ಕುಮಾರ್ ಅವರನ್ನು ಬಂಧಿಸಿದ್ದಾರೆ.
‘ಹೇಮಂತ್ಕುಮಾರ್ ವಿರುದ್ಧ ಆರೋಗ್ಯ ಸಚಿವ ಶಿವಾನಂದ ಪಾಟೀಲ ಅವರ ಆಪ್ತ ಸಹಾಯಕ ಸಹ ಯಶವಂತಪುರ ಠಾಣೆಗೆ ದೂರು ನೀಡಿದ್ದಾರೆ. ಈಗ ಮಂಜೇಗೌಡ ವಿಜಯನಗರ ಠಾಣೆಗೆ ದೂರು ಕೊಟ್ಟಿದ್ದು, ಪ್ರತ್ಯೇಕ ಎಫ್ಐಆರ್ ದಾಖಲಿಸಿಕೊಂಡು ಪರಿಶೀಲಿಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ದೂರಿನ ವಿವರ: ‘ಸಚಿವರೊಬ್ಬರಿಂದ ಕೆಲಸ ಮಾಡಿಸಿಕೊಡುವುದಾಗಿ ಹೇಳಿದ್ದ ಹೇಮಂತ್ ಹಾಗೂ ಪುಷ್ಪನಾಥ್, ವಿಜಯನಗರದ ಇಂದ್ರಪ್ರಸ್ಥ ಹೋಟೆಲ್ ಬಳಿ ₹ 20 ಲಕ್ಷ ಪಡೆದುಕೊಂಡಿದ್ದರು. ಆ ನಂತರ, ಯಾವುದೇ ಕೆಲಸ ಮಾಡಿಸಿಕೊಟ್ಟಿಲ್ಲ’ ಎಂದು ದೂರಿನಲ್ಲಿ ಮಂಜೇಗೌಡ ಹೇಳಿದ್ದಾರೆ.
‘ಹಣ ವಾಪಸು ನೀಡುವಂತೆ ಒತ್ತಾಯಿಸಿದಾಗ, ರಾಮಕೃಷ್ಣ ಯಲ್ಲಪ್ಪ ಕಂಬಾರ್ ಎಂಬುವರ ಹೆಸರಿನಲ್ಲಿ ₹ 20 ಲಕ್ಷಕ್ಕೆ ಚೆಕ್ ಕೊಟ್ಟಿದ್ದರು. ಆ ಚೆಕ್ ಸಹ ಬೌನ್ಸ್ ಆಗಿದೆ’ ಎಂದು ಅವರು ದೂರಿದ್ದಾರೆ.