ಯಲಹಂಕ: ಇಲ್ಲಿನ ಮೂರು ಪ್ರಮುಖ ವೃತ್ತಗಳಲ್ಲಿ ₹270 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ‘ಇಂಟಿಗ್ರೇಟೆಡ್ ಎಲಿವೇಟೆಡ್ ಫ್ಲೈಓವರ್’ಗಳ ನಿರ್ಮಾಣ ಕಾಮಗಾರಿಗೆ ಶಾಸಕ ಎಸ್.ಆರ್. ವಿಶ್ವನಾಥ್ ಎನ್ಇಎಸ್ ವೃತ್ತದಲ್ಲಿ ಚಾಲನೆ ನೀಡಿದರು.
‘ಯಲಹಂಕ ಅತಿ ವೇಗವಾಗಿ ಬೆಳೆಯುತ್ತಿದೆ. ಇಲ್ಲಿನ ಎಲ್ಲ ವೃತ್ತಗಳಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪೊಲೀಸ್ ವೃತ್ತದಿಂದ ಸಂದೀಪ್ ಉನ್ನಿಕೃಷ್ಣನ್ ವೃತ್ತದವರೆಗೆ ₹1.75 ಕೋಟಿ ವೆಚ್ಚದಲ್ಲಿ 1.84 ಕಿಲೋಮೀಟರ್ ಉದ್ದದ ಮೇಲ್ಸೇತುವೆ ನಿರ್ಮಿಸಲಾಗುವುದು. ಇದು ಬೆಂಗಳೂರಿನಲ್ಲಿ 3ನೇ ಅತಿ ಉದ್ದದ ಸಂಯೋಜಿತ ಮೇಲ್ಸೇತುವೆಯಾಗಲಿದೆ’ ಎಂದು ತಿಳಿಸಿದರು.
‘ಹಳೇನಗರದ ಕೆಂಪೇಗೌಡ ವೃತ್ತದಿಂದ ಕೋಗಿಲು ವೃತ್ತದವರೆಗೆ ₹70 ಕೋಟಿ ವೆಚ್ಚದಲ್ಲಿ ಮೇಲ್ಸೇತುವೆ ಹಾಗೂ ₹15 ಕೋಟಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣದಿಂದ ದೊಡ್ಡಬಳ್ಳಾಪುರ ರಸ್ತೆ ಹಾಗೂ ಉಪನಗರಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೆ ಕೆಳಸೇತುವೆ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಾಗಿದೆ. ಒಂದೂವರೆ ವರ್ಷದಲ್ಲಿ ಈ ಮೇಲ್ಸೇತುವೆಗಳ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೆ ಸಮಯ ನಿಗದಿಪಡಿಸಲಾಗಿದೆ’ ಎಂದರು.
‘ಮುಖ್ಯಮಂತ್ರಿಯವರು ಬೆಂಗಳೂರಿನ ಅಭಿವೃದ್ಧಿಗಾಗಿ ಅಮೃತ ನಗರೋತ್ಥಾನ ಯೋಜನೆಯಡಿ ₹6,000 ಕೋಟಿ ಅನುದಾನ ಘೋಷಿಸಿದ್ದಾರೆ. ಅದರಲ್ಲಿಯೂ ಯಲಹಂಕದ ಅಭಿವೃದ್ಧಿಗೆ ಸಾಕಷ್ಟು ಅನುದಾನ ಬಿಡುಗಡೆ ಮಾಡುವುದರಿಂದ ಬಾಕಿ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು’ ಎಂದು ತಿಳಿಸಿದರು.
ಬಿಬಿಎಂಪಿವಿಶೇಷ ಆಯುಕ್ತ (ಯೋಜನೆಗಳು) ಮನೋಜ್ ಜೈನ್, ಯಲಹಂಕ ವಲಯದ ಜಂಟಿ ಆಯುಕ್ತರಾದ ಪೂರ್ಣಿಮಾ, ಮುಖಂಡರಾದ ಎಂ.ಸತೀಶ್, ಎಂ.ಮುನಿರಾಜು, ಬಿಬಿಎಂಪಿ ಮುಖ್ಯ ಎಂಜಿನಿಯರ್ (ರಸ್ತೆ, ಮೂಲಭೂತ ಸೌಕರ್ಯ) ಬಿ.ಎಸ್.ಪ್ರಹ್ಲಾದ್, ಯಲಹಂಕ ವಲಯದ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್ ಇದ್ದರು.