ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್‌ಸ್ಟೆಬಲ್ ನೇಮಕಾತಿ: ‌‌‌ಮತ್ತೆ ನಾಲ್ವರ ಸೆರೆ

ಗೋಕಾಕ್‌ನ ಏಕಲವ್ಯ ಪರೀಕ್ಷಾ ಕೇಂದ್ರ ಶಾಮೀಲು
Last Updated 14 ಜೂನ್ 2021, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪೊಲೀಸ್ ಕಾನ್‌ಸ್ಟೆಬಲ್‌ ನೇಮಕಾತಿಯ ದೈಹಿಕ ಹಾಗೂ ಲಿಖಿತ ಪರೀಕ್ಷೆಗೆ ನಕಲಿ ಅಭ್ಯರ್ಥಿಗಳು ಹಾಜರಾಗಿದ್ದ ಪ್ರಕರಣಗಳ ತನಿಖೆ ಕೈಗೆತ್ತಿಕೊಂಡಿರುವ ಸಿಐಡಿ ಅಧಿಕಾರಿಗಳು, ಗೋಕಾಕ್‌ನಲ್ಲಿರುವ ಏಕಲವ್ಯ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಸಂಸ್ಥಾಪಕ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

ಪೊಲೀಸ್‌ ಇಲಾಖೆಯ ವಿವಿಧ ದಳಗಳಲ್ಲಿ ಖಾಲಿ ಇರುವ 3,702 ಕಾನ್‌ಸ್ಟೆಬಲ್ ಹುದ್ದೆಗಳ ಭರ್ತಿಗೆ 2020ರಲ್ಲಿ ನೇಮಕಾತಿ ಪ್ರಕ್ರಿಯೆ ನಡೆಸಲಾಗಿತ್ತು. ಬೆಂಗಳೂರು, ಬಳ್ಳಾರಿ, ಚಿತ್ರದುರ್ಗ, ಯಾದಗಿರಿ, ಶಿವಮೊಗ್ಗ ಹಾಗೂ ಹುಬ್ಬಳ್ಳಿ–ಧಾರವಾಡದಲ್ಲಿ ಪರೀಕ್ಷೆಗೆ ನಕಲಿ ಅಭ್ಯರ್ಥಿಗಳು ಹಾಜರಾಗಿದ್ದರು. ಈ ಬಗ್ಗೆ ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ 21 ಪ್ರಕರಣಗಳ ತನಿಖೆಯನ್ನು ಸಿಐಡಿ ವಹಿಸಲಾಗಿದೆ.

‘ಪರೀಕ್ಷೆಗೆ ನಕಲಿ ಅಭ್ಯರ್ಥಿಗಳು ಹಾಜರಾಗುವಂತೆ ಸಂಚು ಮಾಡಿದ್ದ ಗೋಕಾಕ್‌ನ ಏಕಲವ್ಯ ಸಂಸ್ಥೆಯ ಲಕ್ಷ್ಮಣ ಉದ್ದಪ್ಪ ಬಂಡಿ, ಭೀಮಪ್ಪ ಮಹಾದೇವ ಹುಲ್ಲೋಳಿ ಅಲಿಯಾಸ್ ಭೀಮ್‌ಶಿ, ಲಕ್ಷ್ಮಣ ಮುತ್ತಪ್ಪ ಪರಣ್ಣವರ್ ಹಾಗೂ ಮಲ್ಲಿಕಾರ್ಜುನ್ ಯಮುನಪ್ಪ ಬಬಲಣ್ಣವರ್ ಎಂಬುವರನ್ನು ಬಂಧಿಸಲಾಗಿದೆ. ಪ್ರಮುಖ ಆರೋಪಿ ಬಸವರಾಜ್ ದುಂಡಾನಟ್ಟಿ ಹಾಗೂ ಇತರರು ತಲೆಮರೆಸಿಕೊಂಡಿದ್ದಾರೆ’ ಎಂದೂ ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದರು.

' ಅಸಲಿ ಅಭ್ಯರ್ಥಿಗಳಿಂದ ಹಣ ಪಡೆದಿದ್ದಬಂಧಿತ ಆರೋಪಿಗಳು, ನಕಲಿ ಅಭ್ಯರ್ಥಿಗಳಿಂದ ಪರೀಕ್ಷೆ ಬರೆಸುತ್ತಿದ್ದರು. ಈಗಾಗಲೇ ಸರ್ಕಾರಿ ಹುದ್ದೆ ಪಡೆದಿದ್ದ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದವರೇ ನಕಲಿ ಅಭ್ಯರ್ಥಿಗಳಾಗಿ ಪರೀಕ್ಷೆಗೆ ಹಾಜರಾಗುತ್ತಿದ್ದರು’ ಎಂದೂ ಮಾಹಿತಿ ನೀಡಿದರು.

‘ಪ್ರಕರಣ ಸಂಬಂಧ ಇದುವರೆಗೂ 61 ಆರೋಪಿಗಳನ್ನು ಬಂಧಿಸಲಾಗಿದೆ. ₹ 1.54 ಲಕ್ಷ ನಗದು, ಎರಡು ಕಾರು, ಲ್ಯಾಪ್‌ಟಾಪ್, ಕಂಪ್ಯೂಟರ್, ಹಾರ್ಡ್‌ ಡಿಸ್ಕ್, ಪೆನ್‌ಡ್ರೈವ್ ಹಾಗೂ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿದ್ದ 21 ಅಭ್ಯರ್ಥಿಗಳನ್ನೂ ಡಿಬಾರ್ ಮಾಡಿಸಲಾಗಿದೆ’ ಎಂದೂ ಹೇಳಿದರು.

ಆಧಾರ್ ಕಾರ್ಡ್‌ನಲ್ಲಿ ಫೋಟೊ ಬದಲು: ‘ಅಸಲಿ ಅಭ್ಯರ್ಥಿಗಳ ಆಧಾರ್‌ ಕಾರ್ಡ್‌ನಲ್ಲಿರುತ್ತಿದ್ದ ಫೋಟೊ ಜಾಗದಲ್ಲಿ ನಕಲಿ ಅಭ್ಯರ್ಥಿ ಫೋಟೊ ಸೇರಿಸಿ ಮುದ್ರಿಸಲಾಗುತ್ತಿತ್ತು. ಅದೇ ಆಧಾರ್ ಕಾರ್ಡ್‌ ಇಟ್ಟುಕೊಂಡು ನಕಲಿ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಿದ್ದರು’ ಎಂದೂ ಅಧಿಕಾರಿ ತಿಳಿಸಿದರು.

‘ಹುದ್ದೆಗೆ ಆಯ್ಕೆಯಾಗಿದ್ದ ಅಭ್ಯರ್ಥಿಗಳ ದಾಖಲೆಗಳ ಪರಿಶೀಲನೆ ವೇಳೆ ಅಕ್ರಮ ಬಯಲಾಗಿತ್ತು. ಆಯಾ ಠಾಣೆ ಪೊಲೀಸರು ಆರಂಭದಲ್ಲಿ ಕೆಲವರನ್ನು ಬಂಧಿಸಿ ವಿಚಾರಣೆ ನಡೆಸಿದ್ದರು. ಇದರ ಹಿಂದೆ ದೊಡ್ಡ ಜಾಲವಿರುವುದು ಪತ್ತೆಯಾಗಿತ್ತು. ಹೀಗಾಗಿ, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT