ಬೆಂಗಳೂರು: ಗಾರ್ಮೆಂಟ್ಸ್ ಕಾರ್ಖಾನೆಯೊಂದರ ಗುಣಮಟ್ಟ ತಪಾಸಣೆ ನೌಕರ ನವೀನ್ ಕುಮಾರ್ (31) ಎಂಬುವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಬಗ್ಗೆ ಆರ್ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಆಂಧ್ರಪ್ರದೇಶದ ನವೀನ್ಕುಮಾರ್, ತಂದೆ– ತಾಯಿ ಜೊತೆ 18 ವರ್ಷಗಳಿಂದ ನಗರದಲ್ಲಿ ವಾಸವಿದ್ದರು. ಅವರ ಆತ್ಮಹತ್ಯೆ ಬಗ್ಗೆ ತಂದೆಯಿಂದ ಹೇಳಿಕೆ ಪಡೆದು ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಪೆಟ್ರೋಲ್ ಬಾಟಲಿ ಸಮೇತ ಪೀಣ್ಯ ಸರ್ಕಾರಿ ಐಟಿಐ ಕಾಲೇಜು ಆವರಣಕ್ಕೆ ಶುಕ್ರವಾರ ಮಧ್ಯಾಹ್ನ ನವೀನ್ ಬಂದಿದ್ದರು. ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡಿದ್ದರು.’
‘ರಕ್ಷಣೆಗೆ ಹೋಗಿದ್ದ ಸ್ಥಳೀಯರು, ಮೈಗೆ ಹತ್ತಿಕೊಂಡಿದ್ದ ಬೆಂಕಿ ಆರಿಸಿ ಇಎಸ್ಐ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ನವೀನ್ ಅವರನ್ನು ಸಪ್ತಗಿರಿ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಸಂಜೆ ನವೀನ್ ಅಸುನೀಗಿದರು’ ಎಂದೂ ತಿಳಿಸಿದರು.
‘ಎಡಗೈ ಸ್ವಾಧೀನ ಸಮಸ್ಯೆಯಿಂದ ಬಳಲುತ್ತಿದ್ದ ನವೀನ್, ಮಾನಸಿಕವಾಗಿ ಕುಗ್ಗಿದ್ದರು. ಮದುವೆಯಾಗಲು ಹುಡುಗಿ ಸಿಕ್ಕಿರಲಿಲ್ಲ. ತಂದೆಯೂ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದರು. ಇದರಿಂದ ನೊಂದು ನವೀನ್ ಆತ್ಮಹತ್ಯೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದೂ ಹೇಳಿದರು.