ಬೆಂಗಳೂರು: ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿದ್ದ ಕಳ್ಳನೊಬ್ಬ, ವೃದ್ಧೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿದ್ದಾನೆ.
‘ಲೇಔಟ್ನ 18ನೇ ಅಡ್ಡರಸ್ತೆಯ ಮನೆಯೊಂದರಲ್ಲಿ ಸರೋಜಿನಿ (86) ಎಂಬುವರು ವಾಸವಿದ್ದಾರೆ. ಅವರು ಒಬ್ಬಂಟಿಯಾಗಿದ್ದ ವೇಳೆ ಹಗಲಿನಲ್ಲೇ ಕಳ್ಳ ಮನೆಯೊಳಗೆ ನುಗ್ಗಿ ಕೃತ್ಯ ಎಸಗಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಮಂಕಿ ಟೋಪಿ ಹಾಕಿಕೊಂಡಿದ್ದ ಕಳ್ಳ, ಮನೆಯಲ್ಲಿ ಕುಳಿತಿದ್ದ ವೃದ್ಧೆ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತುಕೊಂಡಿದ್ದ. ನಂತರ ವೃದ್ಧೆಯನ್ನು ತಳ್ಳಿ ಓಡಿ ಹೋಗಿದ್ದಾನೆ.’
‘ಮನೆ ಹಾಗೂ ವೃದ್ಧೆ ಒಂಟಿಯಾಗಿರುವುದನ್ನು ತಿಳಿದುಕೊಂಡಿದ್ದವರೇ ಕೃತ್ಯ ಎಸಗಿರುವ ಸಾಧ್ಯತೆ ಇದೆ. ಕಳ್ಳನಿಗಾಗಿ ಶೋಧ ಮುಂದುವರಿದಿದೆ’ ಎಂದೂ ಮೂಲಗಳು ತಿಳಿಸಿವೆ.