ಬೆಂಗಳೂರು: ಸರ್ಕಾರಿ ಕೆಲಸ ಕೊಡಿಸುವ ಆಮಿಷವೊಡ್ಡಿ ನಗರದ ವ್ಯಾಪಾರಿಯೊಬ್ಬರಿಂದ ₹ 1.02 ಕೋಟಿ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸಹಕಾರ ನಗರದ ನಿವಾಸಿಯಾದ ವ್ಯಾಪಾರಿ ನಾಗೇಂದ್ರ ರಾವ್ ಅವರು ವಂಚನೆ ಬಗ್ಗೆ ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ಬಳ್ಳಾರಿ ಜಿಲ್ಲೆಯ ಜಿ.ಎಸ್. ವೆಂಕಟರೆಡ್ಡಿ ಹಾಗೂ ಧಾರವಾಡ ಜಿಲ್ಲೆಯ ಜಿ.ಎಸ್. ಬಸನಗೌಡ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದೂರುದಾರ ನಾಗೇಂದ್ರ ಅವರು ತಮ್ಮ ಸಂಬಂಧಿಕರಿಬ್ಬರಿಗೆ ಕೆಲಸ ಕೊಡಿಸುವುದಕ್ಕಾಗಿ ಆರೋಪಿಗಳಿಗೆ ಹಣ ನೀಡಿದ್ದರು. ಆದರೆ, ಆರೋಪಿಗಳು ಕೆಲಸ ಕೊಡಿಸಿಲ್ಲ. ಹಣವನ್ನೂ ವಾಪಸು ನೀಡದೇ ನಾಪತ್ತೆಯಾಗಿದ್ದಾರೆ’ ಎಂದೂ ತಿಳಿಸಿವೆ.