ಬೆಂಗಳೂರು: ‘ವಿನಾಕಾರಣ ಜಗಳ ತೆಗೆದಿದ್ದ ಪದ್ಮಮ್ಮ ಹಾಗೂ ಕಾವ್ಯಾ ನನ್ನ ಹೊಟ್ಟೆಗೆ ಒದ್ದು ಹಲ್ಲೆ ಮಾಡಿದ್ದು, ಇದರಿಂದಾಗಿ ಹೊಟ್ಟೆಯಲ್ಲಿಯೇ ಮಗು ಮೃತಪಟ್ಟಿದೆ’ ಎಂದು ಆರೋಪಿಸಿ ಮಹಿಳೆಯೊಬ್ಬರು ಗೋವಿಂದರಾಜನಗರ ಠಾಣೆಗೆ ದೂರು ನೀಡಿದ್ದಾರೆ.
‘ಸುಬ್ಬಣ್ಣ ಗಾರ್ಡನ್ ನಿವಾಸಿ 32 ವರ್ಷದ ಮಹಿಳೆ ದೂರು ನೀಡಿದ್ದಾರೆ. ಆರೋಪಿಗಳಾದ ಪದ್ಮಮ್ಮ ಹಾಗೂ ಕಾವ್ಯಾ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ದೂರುದಾರ ಮಹಿಳೆ, ಗರ್ಭಿಣಿ ಆಗಿದ್ದರು. ಅವರ ಪತಿ, ಬೈಕ್ ದುರಸ್ತಿ ಮಳಿಗೆ ಇಟ್ಟುಕೊಂಡಿದ್ದಾರೆ. ಅವರ ಮಳಿಗೆ ಪಕ್ಕವೇ ಆರೋಪಿಗಳ ಬಿರಿಯಾನಿ ಹೋಟೆಲ್ ಇದೆ. ಫೆ. 2ರಂದು ಬೆಳಿಗ್ಗೆ ಮಹಿಳೆಯ ಪತಿ ಹಾಗೂ ಆರೋಪಿಗಳ ನಡುವೆ ಜಗಳ ಆಗಿತ್ತು. ನಂತರ, ಎರಡೂ ಕಡೆಯವರು ಠಾಣೆಗೆ ಬಂದು ಸಂಧಾನ ಮಾಡಿಕೊಂಡು ಹೋಗಿದ್ದರು’ ಎಂದು ತಿಳಿಸಿವೆ.
‘ಠಾಣೆಯಿಂದ ಹೊರಬಂದ ಆರೋಪಿಗಳು, ರಸ್ತೆಯಲ್ಲಿ ಹೊರಟಿದ್ದ ದೂರುದಾರ ಮಹಿಳೆಯನ್ನು ಅಡ್ಡಗಟ್ಟಿ ಪುನಃ ಜಗಳ ಮಾಡಿದ್ದರು. ಇದೇ ಸಂದರ್ಭದಲ್ಲಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು, ಹೊಟ್ಟೆಗೆ ಒದ್ದಿದ್ದರು. ಕುಸಿದು ಬಿದ್ದಿದ್ದ ಮಹಿಳೆಯನ್ನು ಸಂಬಂಧಿಕರು ಹಾಗೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಫೆ. 14ರಂದು ಹೊಟ್ಟೆ ನೋವು ಹೆಚ್ಚಾಗಿತ್ತು. ಹೆರಿಗೆ ಮಾಡಿದ್ದ ವೈದ್ಯರು, ಹೊಟ್ಟೆಯಲ್ಲಿಯೇ ಮಗು ಮೃತಪಟ್ಟಿದ್ದಾಗಿ ಹೇಳಿದರು. ಈ ಸಂಗತಿಯನ್ನು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.