ಬೆಂಗಳೂರು: ‘ಮಹಿಳೆಯರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಸಬಲೀಕರಣಗಳೊಳಿಸುವ ನಿಟ್ಟಿನಲ್ಲಿ ಸರ್ಕಾರ ರೂಪಿಸಿರುವ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು’ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ ತಿಳಿಸಿದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಹೊಂಬಾಳೆ ಅರಳಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ‘ಮಹಿಳೆಯರಿಗೆ ಮನೆಯಲ್ಲಿಯೂ ಸಹಕಾರ ನೀಡಬೇಕು. ಮಹಿಳೆಯರನ್ನು ಪೂಜಿಸಿದರೆ ಸಾಲದು, ಅವರಿಗೆ ಗೌರವ-ಸಮಾನತೆ ನೀಡಿದರೆ ಸಾಕು’ ಎಂದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ‘ಸ್ಫೂರ್ತಿದಾಯಿನಿ-ಪ್ರಗತಿಗಾಮಿನಿ, ನಾ-ಹೆಣ್ಣೆಂಬುದೇ ಹೆಮ್ಮೆ’ ಎನ್ನುವ ಶೀರ್ಷಿಕೆಯಡಿ ರಾಜ್ಯದಾದ್ಯಂತ ಮೊಟ್ಟ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದು ಹೇಳಿದರು.
‘ಬೇರೆ ಜಿಲ್ಲೆಯಿಂದ ಬರುವ ಮಹಿಳೆಯರಿಗೆ ಈ ಮೊದಲು ನೌಕರರ ಭವನದಲ್ಲಿ ಮೂಲ ಸೌಲಭ್ಯಗಳಿರಲಿಲ್ಲ. ಈಗ 60 ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಿ ಸೌಲಭ್ಯ ಕಲ್ಪಿಸಲಾಗಿದೆ’ ಎಂದರು.
ಕುಸ್ತಿ ಆಡುವ ಸಂದರ್ಭದಲ್ಲಿ ಕೈ ಗಾಯಗೊಂಡಿದ್ದರಿಂದ ರಾಷ್ಟ್ರಮಟ್ಟದ ಮಹಿಳಾ ಕುಸ್ತಿ ಕ್ರೀಡಾಪಟು ರತ್ನಮಾಲ ಅವರು ಸಂಘದ ವತಿಯಿಂದ ₹25 ಸಾವಿರ ಪರಿಹಾರ ವಿತರಿಸಲಾಯಿತು. ಕರಕುಶಲ ಅಭಿವೃಧ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾ ಮೌದ್ಗಿಲ್ ಅವರು ಉಪನ್ಯಾಸ ನೀಡಿದರು.
ನ್ಯಾಯಾಧೀಶರಾದ ಸುನಿತಾ ಶರ್ಮಾ, ಮೋಹನ್ ಕುಮಾರಿ, ರಾಜ್ಯ ಉಪಾಧ್ಯಕ್ಷರಾದ ಎಚ್.ಎಸ್. ಹೇಮಲತಾ, ರಾಜ್ಯ ಜಂಟಿ ಕಾರ್ಯದರ್ಶಿ ರುಚಿತ, ರಾಜ್ಯ ಸಂಘಟನಾ ಕಾರ್ಯದರ್ಶಿ ಯಶೋಧ, ರಾಜ್ಯ ಪರಿಷತ್ ಸದಸ್ಯೆ ಶ್ರೀಮತಿ ರೋಷಿಣಿ ಇದ್ದರು.