ಬೆಂಗಳೂರು: ಪದೇ ಪದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಜನರನ್ನು ಬೆದರಿಸುತ್ತಿದ್ದ ಆರೋಪದಡಿ ರೌಡಿಗಳಾದ ಜೆ.ಪಿ. ಮಂಜುನಾಥ್ ಅಲಿಯಾಸ್ ಕೋಳಿ (31) ಹಾಗೂ ಸಂಪತ್ರಾವ್ ಅಲಿಯಾಸ್ ಮತ್ತಿಯನ್ನು (28) ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಲಾಗಿದೆ.
‘ದೊಡ್ಡಬಿದರಕಲ್ಲು ಬಳಿಯ ಚನ್ನನಾಯಕನಹಳ್ಳಿ ನಿವಾಸಿ ಮಂಜುನಾಥ್, ಸುಲಿಗೆ, ಸರಗಳವು, ಹಲ್ಲೆ ಸೇರಿ 32 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಜೈಲಿಗೂ ಹೋಗಿ ಜಾಮೀನು ಮೇಲೆ ಹೊರಬಂದಿದ್ದ. ಈತನ ಹೆಸರು ಪೀಣ್ಯ ಠಾಣೆಯ ರೌಡಿ ಪಟ್ಟಿಯಲ್ಲಿತ್ತು’ ಎಂದು ಪೊಲೀಸರು ಹೇಳಿದರು.
‘ಇನ್ನೊಬ್ಬ ರೌಡಿ ಮತ್ತಿ, ಬಸವೇಶ್ವರನಗರ ನಿವಾಸಿ. ಕೊಲೆ, ಸುಲಿಗೆ, ಅಪಹರಣ, ಕಳ್ಳತನ, ಹಲ್ಲೆ ಸೇರಿದಂತೆ 31 ಪ್ರಕರಣಗಳಲ್ಲಿ ಆರೋಪಿಯಾಗಿದ್ದ. 2008ರಿಂದಲೇ ಅಪರಾಧ ಕೃತ್ಯಗಳಲ್ಲಿ ತೊಡಗಿದ್ದ ಮತ್ತಿಯ ಹೆಸರು ಮಹಾಲಕ್ಷ್ಮಿ ಲೇಔಟ್ ಠಾಣೆಯ ರೌಡಿ ಪಟ್ಟಿಯಲ್ಲಿತ್ತು’ ಎಂದು ತಿಳಿಸಿದರು.
‘ರೌಡಿಗಳಾದ ಮಂಜುನಾಥ್ ಹಾಗೂ ಮತ್ತಿ ಜನರಿಗೆ ಪದೇ ಪದೇ ತೊಂದರೆ ನೀಡುತ್ತಿದ್ದರು. ಸಾರ್ವಜನಿಕರಲ್ಲಿ ಭಯವನ್ನುಂಟು ಮಾಡುತ್ತಿದ್ದರು. ಇವರಿಬ್ಬರ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲು ಪ್ರಸ್ತಾವ ಸಲ್ಲಿಸಲಾಗಿತ್ತು. ಅದನ್ನು ಪರಿಶೀಲಿಸಿದ್ದ ಕಮಿಷನರ್ ಪ್ರತಾಪ್ ರೆಡ್ಡಿ, ಗೂಂಡಾ ಕಾಯ್ದೆಯಡಿ ರೌಡಿಗಳನ್ನು ಒಂದು ವರ್ಷ ಜೈಲಿಗಟ್ಟಲು ಆದೇಶ ಹೊರಡಿಸಿದ್ದಾರೆ’ ಎಂದೂ ಪೊಲೀಸರು ಹೇಳಿದರು.