ಬೆಂಗಳೂರು: ‘ನಮ್ಮ ಮೆಟ್ರೊ’ದ ಪೀಣ್ಯ ಮೆಟ್ರೊ ನಿಲ್ದಾಣ ಪ್ಲಾಟ್ಫಾರಂ ಬಳಿ ಗೋಡೆಯ ಮೇಲೆ ‘ಆಪ್ ಸೇ ಬಾತ್ ಕರ್ ಕೆ ಖುಷಿ ಮಿಲಿ’ (ನಿಮ್ಮೊಂದಿಗೆ ಮಾತನಾಡಿ ಖುಷಿಯಾಯಿತು) ಎಂಬ ಹಿಂದಿ ವಾಕ್ಯ ಬರೆದಿರುವುದಕ್ಕೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದು, ಅದನ್ನು ತೆಗೆಸುವಂತೆ ಒತ್ತಾಯಿಸಿದ್ದಾರೆ.
‘ಮೆಟ್ರೊ ನಿಲ್ದಾಣದೊಳಗೆ ಹಿಂದಿಯಲ್ಲಿ ಈ ಸಾಲು ಬರೆಯುವ ಅವಶ್ಯಕತೆ ಏನಿತ್ತು ಎಂಬುದು ತಿಳಿಯುತ್ತಿಲ್ಲ. ಕ್ರಮೇಣವಾಗಿ ನಮ್ಮ ಮೆಟ್ರೊವನ್ನು ಹಿಂದಿಮಯ ಮಾಡುವ ಹುನ್ನಾರ ಇದು’ ಎಂದು ಪ್ರಯಾಣಿಕ ಡಾ. ಎ. ಭಾನು ದೂರಿದರು.
‘ಈ ಸಾಲು 2014ರಿಂದ ನಿಲ್ದಾಣದಲ್ಲಿದೆ. ಚಿತ್ರಕಲಾ ಶಾಲೆಯ ವಿದ್ಯಾರ್ಥಿಗಳು ಈ ಸಾಲುಗಳನ್ನು ಬರೆದಿದ್ದಾರೆ’ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಈ ಬರಹದಲ್ಲಿ ಯಾವ ರೀತಿಯ ಕಲೆ ಇದೆಯೋ ತಿಳಿಯುತ್ತಿಲ್ಲ’ ಎಂದು ಪ್ರಯಾಣಿಕರು ವ್ಯಂಗ್ಯವಾಡಿದ್ದಾರೆ.