ಬೆಂಗಳೂರು: ‘ನಗರ ಸರ್ಕಾರಿ ಶ್ರೀಕೃಷ್ಣರಾಜೇಂದ್ರ ಸಿಲ್ವರ್ ಜ್ಯೂಬಿಲಿ ತಾಂತ್ರಿಕ ಮಹಾ ವಿದ್ಯಾಲಯದ (ಎಂಜಿನಿಯರಿಂಗ್ ಕಾಲೇಜು) ಅಭಿವೃದ್ಧಿಯಲ್ಲಿ ಸಹಭಾಗಿತ್ವ ವಹಿಸುವಂತೆ ಐಬಿಎಂ ಕಂಪನಿಗೆ ಮನವಿ ಮಾಡಲಾಗಿದೆ. ಸಕಾರಾತ್ಮಕ ಸ್ಪಂದನೆ ಲಭಿಸಿದೆ’ ಎಂದು ಮಾಹಿತಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
ಐಬಿಎಂ ಕಂಪನಿಯ ಹಿರಿಯ ಅಧಿಕಾರಿಗಳ ತಂಡವು ಸಚಿವರನ್ನು ಮಂಗಳವಾರ ಭೇಟಿಮಾಡಿ ಚರ್ಚೆ ನಡೆಸಿತು. ಬಳಿಕ ಸಚಿವರು ಈ ವಿಷಯ ತಿಳಿಸಿದರು.
ಐಬಿಎಂ ದಕ್ಷಿಣ ಏಷ್ಯಾ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಪಟೇಲ್, ‘ಸೈಬರ್ ಭದ್ರತೆಗೆ ಸಂಬಂಧಿಸಿದ ಅತ್ಯಾಧುನಿಕ ಕಮಾಂಡ್ ಸೆಂಟರ್ ಅನ್ನು ಕಂಪನಿಯು ಬೆಂಗಳೂರಿನಲ್ಲಿ ತೆರೆದಿದೆ. ರಾಜ್ಯ ಸರ್ಕಾರವು ತನ್ನ ದತ್ತಾಂಶಗಳ ಸಂರಕ್ಷಣೆಗೆ ಈ ಕೇಂದ್ರವನ್ನು ಬಳಸಿಕೊಳ್ಳಬಹುದು’ ಎಂದರು.
ಸೈಬರ್ ಭದ್ರತಾ ನೀತಿ ರೂಪಿಸುವ ಪ್ರಕ್ರಿಯೆಯಲ್ಲೂ ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲು ಸಿದ್ಧ. ಕರ್ನಾಟಕ ಹಾಲು ಮಹಾಮಂಡಳದಲ್ಲೂ (ಕೆಎಂಎಫ್) ಸೈಬರ್ ಭದ್ರತೆಗೆ ನೆರವು ನೀಡಲು ಕಂಪನಿ ಸಿದ್ಧವಿದೆ ಎಂದರು.
ಸಹಭಾಗಿತ್ವ: ರಾಜ್ಯದಲ್ಲಿ 14 ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳಿವೆ. ಅವುಗಳ ಅಭಿವೃದ್ಧಿಗೂ ನೆರವು ನೀಡಲು ಐಬಿಎಂ ಆಸಕ್ತಿ ಹೊಂದಿದೆ. ರಾಜ್ಯ ಸರ್ಕಾರ ವಿವಿಧೆಡೆ ಸ್ಥಾಪಿಸಿರುವ ಅಟಲ್ ಟಿಂಕರಿಂಗ್ ಲ್ಯಾಬ್ಗಳ ಉನ್ನತೀಕರಣದಲ್ಲೂ ಸಹಭಾಗಿತ್ವ ವಹಿಸಲು ಕಂಪನಿ ಮುಕ್ತ ಮನಸ್ಸು ಹೊಂದಿದೆ ಎಂದರು.
ಐಬಿಎಂ ಕ್ಲೌಡ್ ಮತ್ತು ಕಾಗ್ನಿಟಿವ್ ಸಾಫ್ಟ್ವೇರ್ ಲ್ಯಾಬ್ಸ್ ವಿಭಾಗದ ಉಪಾಧ್ಯಕ್ಷ ಗೌರವ್ ಶರ್ಮ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಬಾಲಾಜಿ ಇದ್ದರು.