ಬೆಂಗಳೂರು: ಗಡಿ ಮೂಲಕ ಅಕ್ರಮವಾಗಿ ನುಸುಳಿ ನಗರದಲ್ಲಿ ವಾಸವಿದ್ದ ಬಾಂಗ್ಲಾದೇಶದ 25 ಪ್ರಜೆಗಳನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದು, ಮಾನವ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ಆರೋಪದಡಿ ಮೂವರನ್ನು ಬಂಧಿಸಿದ್ದಾರೆ.
‘ಬಾಂಗ್ಲಾದೇಶದ ಪ್ರಜೆಗಳು ನಗರದಲ್ಲಿ ಅಕ್ರಮವಾಗಿ ವಾಸವಿರುವ ಬಗ್ಗೆ ಮಾಹಿತಿ ಬಂದಿತ್ತು. ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು. ವಿಶೇಷ ಕಾರ್ಯಾಚರಣೆ ನಡೆಸಿ ಬಾಂಗ್ಲಾ ಪ್ರಜೆಗಳನ್ನು ಪತ್ತೆ ಮಾಡಲಾಗಿದೆ’ ಎಂದು ಸಿಸಿಬಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
‘ರಾಮಮೂರ್ತಿನಗರ, ಮಾರತ್ತಹಳ್ಳಿ, ಬೆಳ್ಳಂದೂರು, ಬಂಡೇಪಾಳ್ಯ, ವರ್ತೂರು ಹಾಗೂ ಹೆಬ್ಬಗೋಡಿ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲಾಯಿತು. ತಾತ್ಕಾಲಿಕ ಶೆಡ್ಗಳಲ್ಲಿ ಉಳಿದುಕೊಂಡಿದ್ದ ಬಾಂಗ್ಲಾದ 25 ಪ್ರಜೆಗಳನ್ನೂ ವಶಕ್ಕೆ ಪಡೆಯಲಾಯಿತು’ ಎಂದು ತಿಳಿಸಿದರು.
‘ವಶಕ್ಕೆ ಪಡೆದಿರುವ ಪ್ರಜೆಗಳ ಪೈಕಿ ಇಬ್ಬರು, ಅಪರಾಧ ಹಿನ್ನೆಲೆಯುಳ್ಳವರು. ಸುಲಿಗೆ ಪ್ರಕರಣದಲ್ಲಿ ಜೈಲಿಗೂ ಹೋಗಿ ಜಾಮೀನು ಮೇಲೆ ಹೊರಗೆ ಬಂದಿದ್ದರು. ಉಳಿದಂತೆ, ಐದು ಪ್ರಜೆಗಳು ತಲೆಮರೆಸಿಕೊಂಡಿದ್ದಾರೆ’ ಎಂದು ಹೇಳಿದರು.
ದಾಖಲೆ ಜಪ್ತಿ:
‘ಬಾಂಗ್ಲಾದೇಶ ಹಾಗೂ ಭಾರತದ ಹಲವು ಗುರುತಿನ ಚೀಟಿಗಳು ಪ್ರಜೆಗಳ ಬಳಿ ಸಿಕ್ಕಿವೆ. ಅವುಗಳನ್ನು ಜಪ್ತಿ ಮಾಡಿ, ಪರಿಶೀಲಿಸಲಾಗುತ್ತಿದೆ’ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
‘ಮಾನವ ಕಳ್ಳ ಸಾಗಾಣಿಕೆಯಲ್ಲಿ ತೊಡಗಿದ್ದ ಮೂವರು, ಬಾಂಗ್ಲಾ ಪ್ರಜೆಗಳನ್ನು ಅಕ್ರಮವಾಗಿ ನಗರಕ್ಕೆ ಕರೆಸಿದ್ದರು. ಕಟ್ಟಡ ನಿರ್ಮಾಣ ಹಾಗೂ ಇತರೆ ಕಡೆಗಳಲ್ಲಿ ಪ್ರಜೆಗಳು ಕೆಲಸ ಮಾಡುತ್ತಿದ್ದರು. ಇನ್ನು ಹಲವರು ನಗರದಲ್ಲಿ ನೆಲೆಸಿರುವ ಮಾಹಿತಿ ಇದ್ದು, ಪರಿಶೀಲಿಸಲಾಗುತ್ತಿದೆ’ ಎಂದು ಹೇಳಿವೆ.