ಬೆಂಗಳೂರು: ‘ನಟ ದರ್ಶನ್ ಹೆಸರು ಹೇಳಿಕೊಂಡು ಕರೆ ಮಾಡುತ್ತಿದ್ದ ಕೆಲ ರೌಡಿಗಳು, ಅಶ್ಲೀಲ ಚಿತ್ರ ಹಾಗೂ ಪದ ಬಳಸಿ ಜೀವ ಬೆದರಿಕೆಯೊಡ್ಡುತ್ತಿದ್ದಾರೆ’ ಎಂದು ಆರೋಪಿಸಿ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರು ಸ್ವೀಕರಿಸಿರುವ ಪೊಲೀಸರು, ಎಫ್ಐಆರ್ ದಾಖಲಿಸಿಕೊಳ್ಳುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.
‘ನಟ ದರ್ಶನ್ ಅವರ ಪ್ರಚೋದನೆಯಿಂದಾಗಿ ಹಿಂಬಾಲಕರು ಹಾಗೂ ಕೆಲ ರೌಡಿಗಳು, ವಾಟ್ಸ್ಆ್ಯಪ್ ಕರೆ ಮಾಡಿ ಬೆದರಿಸುತ್ತಿದ್ದಾರೆ. ಕೆಲವರು, ವಿಡಿಯೊ ಕರೆ ಮಾಡಿ ಅಶ್ಲೀಲವಾಗಿ ಬೈಯುತ್ತಿದ್ದಾರೆ. ಅವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಇಂದ್ರಜಿತ್ ದೂರಿನಲ್ಲಿ ಕೋರಿದ್ದಾರೆ.