ಬೆಂಗಳೂರು: ‘ಜೇಡರದಾಸಿಮಯ್ಯ ಅವರು ಬದುಕನ್ನು ಕಾಯಕದೊಂದಿಗೆ ಆಧ್ಯಾತ್ಮಿಕತೆಯ ನೆಲೆಗಟ್ಟಿನಲ್ಲಿ ಕಟ್ಟಿಕೊಟ್ಟಿದ್ದರು’ ಎಂದು ಕನ್ನಡ ಸಂಘರ್ಷ ಸಮಿತಿ ಅಧ್ಯಕ್ಷ ನಾಗರಾಜಸ್ವಾಮಿ ಹೇಳಿದರು.
ವಚನಜ್ಯೋತಿ ಬಳಗ, ಆಯೋಜಿಸಿದ್ದ ಜೇಡರದಾಸಿಮಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ‘ಜೇಡರದಾಸಿಮಯ್ಯ ಅವರು ಮೌಲ್ಯಯುತ ಬದುಕಿನ ಬಗ್ಗೆ ತಿಳಿಸಿ ಮಾದರಿ ಆಗಿದ್ದರು’ ಎಂದು ಬಣ್ಣಿಸಿದರು.
ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ಆದ್ಯ ವಚನಕಾರ ಎಂದು ಬಣ್ಣಿತರಾಗಿರುವ ಜೇಡರದಾಸಿಮಯ್ಯ ಅವರು ಅತ್ಯಂತ ಆದರ್ಶವಾಗಿ ಬದುಕಿದ್ದರು ಎಂದು ತಿಳಿಸಿದರು.
‘ಜೇಡರದಾಸಿಮಯ್ಯನವರು ಕನ್ನಡಕ್ಕೆ ನೀಡಿದ ಕೊಡುಗೆ’ ವಿಚಾರ ಸಂಕಿರಣದಲ್ಲಿ ಬನಹಟ್ಟಿಯ ಶಕುಂತಲ ಬಾಗಲಕೋಟ ಅವರು ನೇಕಾರರ ಶಿವ ಜೇಡರದಾಸಿಮಯ್ಯ ಕುರಿತು, ಅಂಕಣಗಾರ ಪ್ರಭು ಇಸುವನಹಳ್ಳಿಯವರು ಸೂಳ್ನೂಡಿಕಾರ ಜೇಡರದಾಸಿಮಯ್ಯ ಕುರಿತು, ಕವಿ ಗುಂಡೀಗೆರೆ ವಿಶ್ವನಾಥ್ ರೂಪಕ ಚಕ್ರವರ್ತಿ ಜೇಡರದಾಸಿಮಯ್ಯ ಕುರಿತು ವಿಚಾರಗಳನ್ನು ಮಂಡಿಸಿದರು.
ಬನಹಟ್ಟಿಯ ಶಕುಂತಲ ಬಾಗಲಕೋಟ್, ಪ್ರಭು ಇಸುವನಹಳ್ಳಿ, ಗುಂಡೀಗೆರೆ ವಿಶ್ವನಾಥ್ ಅವರು ವಿಚಾರ ಮಂಡಿಸಿದರು. ಮೀನಾಕ್ಷಿ ಮೇಟಿ, ಟಿ.ಎಂ. ಜಾನಕಿ, ಚಿ. ದಿಶಾ ಹಾಗೂ ವಚನ ಕಲಿಕೆಯ ವಿದ್ಯಾರ್ಥಿಗಳು ಜೇಡರದಾಸಿಮಯ್ಯ ಅವರ ವಚನಗಳ ಗಾಯನ ಮಾಡಿದರು.