ಬೆಂಗಳೂರು: ಹಿರಿಯ ಪತ್ರಕರ್ತ ಪಿ. ಲಂಕೇಶ್ 85ನೇ ಜನ್ಮದಿನದ ಅಂಗವಾಗಿ ಇದೇ 8ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ‘ದೊರೆ ಈಡಿಪಸ್’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.
ಲಂಕೇಶ್ ಬರೆದಿರುವ ಈ ನಾಟಕವನ್ನು ಶಶಿಧರ್ ಭಾರಿಘಾಟ್ ನಿರ್ದೇಶಿಸಿದ್ದಾರೆ. ಸಂಜೆ 6ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ.ಬಿ.ಎಲ್. ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಭಾರತ ಯಾತ್ರಾ ಕೇಂದ್ರ, ಪ್ರಯೋಗ ರಂಗ ಸಂಸ್ಥೆಗಳು ಆಯೋಜಿಸಿರುವ ಈ ಕಾರ್ಯಕ್ರಮದಲ್ಲಿ ಚಲನಚಿತ್ರ ನಿರ್ದೇಶಕ ಟಿ.ಎನ್. ಸೀತಾರಾಮ್ ಅವರಿಗೆ ಲಂಕೇಶ್ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಎನ್.ಆರ್. ವಿಶುಕುಮಾರ್, ಎಂ.ಕೆ. ಭಾಸ್ಕರ್ ರಾವ್, ಕವಿತಾ ಲಂಕೇಶ್ ಹಾಗೂ ಇಂದಿರಮ್ಮ ಲಂಕೇಶ್ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.