ಬೆಂಗಳೂರು: ‘ಉದ್ಯಾನ ನಗರಿ ಎಂಬ ಖ್ಯಾತಿಯ ಬೆಂಗಳೂರಿನಲ್ಲಿ ಕೆರೆಗಳ ಸಂಖ್ಯೆಯನ್ನು ಗೂಗಲ್ನಲ್ಲಿ ಹುಡುಕಿದರೆ ಬೆರಳೆಣಿಕೆಯಷ್ಟು ಕಾಣಸಿಗುತ್ತದೆ. ಇಲ್ಲಿನ ಕೆರೆಗಳ ಇತಿಹಾಸ ಗಮನಿಸಿದರೆ ಈ ಸಂಖ್ಯೆ ಎಷ್ಟರಮಟ್ಟಿಗೆ ಕುಸಿದಿದೆ ಎಂಬುದು ಇದರಿಂದ ಗೊತ್ತಾಗುತ್ತದೆ’ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅಭಿಪ್ರಾಯಪಟ್ಟರು.
ಕರ್ನಾಟಕ ವಕೀಲರ ಪರಿಷತ್ ಮತ್ತು ಬೆಂಗಳೂರು ವಕೀಲರ ಸಂಘದ ವತಿಯಿಂದ ಸೋಮವಾರ ಹೈಕೋರ್ಟ್ನಲ್ಲಿ ಆಯೋಜಿಸಲಾಗಿದ್ದ ಸ್ವಾಗತ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬಾಂಬೆ ಹೈಕೋರ್ಟ್ ಕಟ್ಟಡ ಪಾರಂಪರಿಕವಾದದ್ದು. ಆದರೆ, ಕರ್ನಾಟಕ ಹೈಕೋರ್ಟ್ ಕಟ್ಟಡ ಅದಕ್ಕಿಂತಲೂ ಸುಂದರ ಮತ್ತು ಪಾರಂಪರಿಕ ವೈಭವ ಹೊಂದಿದೆ. 15 ವರ್ಷ 8 ತಿಂಗಳ ಕಾಲ ಅಲ್ಲಿ ಕೆಲಸ ಮಾಡಿ ಇಲ್ಲಿಗೆ ಬಂದಿರುವ ನನಗೆ ಇಲ್ಲಿನ ಪರಿಸರ ಅತೀವ ಹರ್ಷವನ್ನುಂಟು ಮಾಡಿದೆ’ ಎಂದರು.
‘ಅಧೀನ ನ್ಯಾಯಾಲಯಗಳ ಬಲವರ್ಧನೆ ಮತ್ತು ಮೂಲಸೌಕರ್ಯ ವೃದ್ಧಿಸುವುದು ನನ್ನ ಆದ್ಯತೆ. ಅಧೀನ ನ್ಯಾಯಾಲಯಗಳಲ್ಲಿ ತ್ವರಿತ ಹಾಗೂ ಗುಣಮಟ್ಟದ ನ್ಯಾಯದಾನಕ್ಕೆ ಒತ್ತು ನೀಡಬೇಕಾಗಿದೆ ಎಂದರು.
ಬೆಂಗಳೂರು ಎಂದರೆ ದ್ರಾವಿಡ್, ಕುಂಬ್ಳೆ... ತಮ್ಮ ಕಾರ್ಯ ವೈಖರಿಯನ್ನು ಕ್ರಿಕೆಟ್ಗೆ ಹೋಲಿಸಿ ಮಾತನಾಡಿದ ಓಕಾ ಅವರು, ‘ಕ್ರಿಕೆಟ್ ಪ್ರಿಯರ ನಗರ ಎನಿಸಿರುವ ಮುಂಬೈನಿಂದ ಇಲ್ಲಿಗೆ ಬಂದಿರುವ ನನಗೆ, ಬೆಂಗಳೂರು ಎಂದಾಕ್ಷಣ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ನೆನಪಾಗುತ್ತಾರೆ’ ಎಂದರು.
‘ಇಲ್ಲಿನ ಪಿಚ್ ಹೊಸದು, ಬಾಲ್ ಹೊಸದು, ಹಾಗಾಗಿ ಮೊದಲು ಸ್ವಲ್ಪ ಹೆಚ್ಚೂ ಕಡಿಮೆ ಆಗಬಹುದು. ಸಜ್ಜಾದ ನಂತರ ಸರಿ ಹೋಗುತ್ತದೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.