ಬೆಂಗಳೂರು: ಪೊಲೀಸ್ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದರಿಂದ 20 ದಿನಗಳವರೆಗೆ ಸೀಲ್ಡೌನ್ ಆಗಿದ್ದ ಕಲಾಸಿಪಾಳ್ಯ ಠಾಣೆ ಗುರುವಾರದಿಂದ ಪುನಃ ಆರಂಭವಾಗಿದೆ.
ಕೆ.ಆರ್. ಮಾರುಕಟ್ಟೆ ಹಾಗೂ ವಿಕ್ಟೋರಿಯಾ ಆಸ್ಪತ್ರೆ ಸಮೀಪದಲ್ಲೇ ಇರುವ ಕಲಾಸಿಪಾಳ್ಯ ಠಾಣೆಯ 20 ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಮುಂಜಾಗ್ರತಾ ಕ್ರಮವಾಗಿ ಠಾಣೆಯನ್ನು ಸೀಲ್ಡೌನ್ ಮಾಡಲಾಗಿತ್ತು.
ಸೋಂಕಿತರ ಸಂಖ್ಯೆ ಕಡಿಮೆಯಾಗಿರುವುದರಿಂದ ಠಾಣೆ ಕೆಲಸಗಳು ಪುನಃ ಆರಂಭಿಸಲಾಗುತ್ತಿದೆ. ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್, ಹೆಚ್ಚುವರಿ ಪೊಲೀಸ್ ಕಮಿಷನರ್ ಸೌಮೇಂದು ಮುಖರ್ಜಿ, ಪಶ್ಚಿಮ ವಿಭಾಗದ ಡಿಸಿಪಿ ರಮೇಶ್ ಬಾನೂತ್ ಅವರೇ ಗುರುವಾರ ಠಾಣೆಗೆ ಭೇಟಿ ನೀಡಿ ಬಾಗಿಲು ತೆಗೆಸಿದರು. ಸಿಬ್ಬಂದಿಗೂ ಧೈರ್ಯ ತುಂಬಿದರು.
ಭಾಸ್ಕರ್ ರಾವ್, ‘ಪ್ರತಿಯೊಬ್ಬರು ಮಾಸ್ಕ್, ಕೈಗವಸ, ಮುಖಗವಚ ಧರಿಸಬೇಕು. ಅಂತರ ಕಾಯ್ದುಕೊಳ್ಳಬೇಕು. ಆಗಾಗ ಕೈ ತೊಳೆಯುತ್ತಿರಬೇಕು. ಠಾಣೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಕೊರೊನಾ ವಿರುದ್ಧ ನಾವೆಲ್ಲರೂ ಹೋರಾಡಬೇಕು’ ಎಂದು ಸಿಬ್ಬಂದಿಗೆ ಹೇಳಿದರು.