ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಯ ಒರತೆ ಭಾವಗೀತೆ: ಲಕ್ಷ್ಮೀನಾರಾಯಣ ಭಟ್ಟ

Last Updated 6 ಮಾರ್ಚ್ 2021, 7:32 IST
ಅಕ್ಷರ ಗಾತ್ರ

2011, ಅಕ್ಟೋಬರ್ 16ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ `ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಲಕ್ಷ್ಮೀನಾರಾಯಣ ಭಟ್ಟರು ಪಾಲ್ಗೊಂಡು ಮಾತನಾಡಿರುವ ವರದಿ ಮರು ಓದಿಗಾಗಿ.

***

`ಭಾವಗೀತೆಗಳೇ ನನಗೆ ಜನರ ಪ್ರೀತಿ ಗಳಿಸಲು ಕಾರಣವಾಯಿತು~ ಎಂದು ಭಾವಗೀತೆಗಳಿಗೆ ವಿಶಿಷ್ಟ ಆಯಾಮ ನೀಡಿದ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ ಶನಿವಾರ ಇಲ್ಲಿ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕನ್ನಡ ಭವನದ `ನಯನ~ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಮನೆಯಂಗಳದಲ್ಲಿ ಮಾತುಕತೆ~ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಎರಡು ವರ್ಷ ವಯಸ್ಸಿನಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡದ್ದು, ಬಾಲ್ಯದ ಕಡುಬಡತನ, ಶಿವಮೊಗ್ಗದ ಪರಿಸರ, ಗುರುವರ್ಯರ ಆಶೀರ್ವಾದ.. ಇವೆಲ್ಲವೂ ನನ್ನ ಕಾವ್ಯದ ಮೇಲೆ ಸಾಕಷ್ಟು ಪರಿಣಾಮ ಬೀರಿವೆ.

ಈ ಹಿಂದಿನ ಘಟನೆಗಳನ್ನೆಲ್ಲಾ ಮುಸ್ಸಂಜೆಯ ಬಾಳಿನಲ್ಲಿ ಹಿಂತಿರುಗಿ ನೋಡಿ ಮೆಲುಕು ಹಾಕಿದಾಗ ಅರ್ಥಪೂರ್ಣ ಬದುಕು ಕಟ್ಟಿಕೊಳ್ಳಲು ಅವೆಲ್ಲಾ ಒಂದು ರೀತಿಯಲ್ಲಿ ಸಹಕಾರಿಯಾದವು ಎಂದನಿಸುತ್ತಿದೆ~ ಎಂದರು. ಕವಿತೆ, ಭಾವಗೀತೆಗಳ ವಾಚನಕ್ಕೆ ಕಾರ್ಯಕ್ರಮದ ಹೆಚ್ಚು ಸಮಯ ಮೀಸಲಿಟ್ಟ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ, `ಬಾಲ್ಯದಲ್ಲಿಯೇ ವೇದ ಪಂಡಿತರ ಸಹವಾಸದಿಂದ ಕುಮಾರವ್ಯಾಸ ಹಾಗೂ ಕಾಳಿದಾಸನ ಪದ್ಯಗಳು ಜಲಪಾತದ ಹಾಗೆ ನನ್ನ ಮನಸ್ಸಿನ ಮೇಲೆ ಧಾರಾಕಾರವಾಗಿ ಹರಿದು ಹೋದವು.

ಎಂಟು ವರ್ಷ ವಯಸ್ಸಿನಲ್ಲಿದ್ದಾಗಲೇ ಸಂಸ್ಕೃತವನ್ನು ಕಲಿತಿದ್ದರಿಂದ ಕಾವ್ಯದ ಅರಿವು ಮೂಡಲು ಅವಕಾಶವಾಯಿತು~ ಎಂದು ಹೇಳಿದರು.

`ಕವಿತೆಗಳ ಮೂಲಕ ಕಳೆದು ಹೋದ ಅಥವಾ ಗತಿಸಿದ ಕಾಲವನ್ನು ಹಿಡಿದಿಟ್ಟುಕೊಳ್ಳಬಹುದು. ನನ್ನ ಕವಿತೆಗಳು ಹಲವು ಗಾಯಕರ ಕಂಠ ಸಿರಿಯಲ್ಲಿ ಮೂಡಿ ಬಂದಿರುವುದು ಸಾಕಷ್ಟು ಖುಷಿ ತಂದಿದೆ~ ಎಂದು ಅವರು ಹೇಳಿದರು.

ಇದು ಮಹಾಕಾವ್ಯದ ಕಾಲವಲ್ಲ: ಶೇಕ್ಸ್‌ಪಿಯರ್, ಎಲಿಯಟ್‌ರಂತಹ ಲೇಖಕರ ಬರಹಗಳನ್ನು ಕನ್ನಡಕ್ಕೆ ಸಮರ್ಥವಾಗಿ ಅನುವಾದಿಸಿದ ತಮಗೆ ಮಹಾಕಾವ್ಯ ಬರೆಯಲು ಏಕೆ ಸಾಧ್ಯವಾಗದು ಎಂದು ನಂತರ ನಡೆದ `ಸಂವಾದ~ದಲ್ಲಿ ಸಭಿಕರೊಬ್ಬರು ಕೇಳಿದ ಪ್ರಶ್ನೆಗೆ, `ಇದು ಮಹಾಕಾವ್ಯದ ಕಾಲವಲ್ಲ~ ಎಂದು ಹೇಳಿದರು.

`ಕುವೆಂಪು ಕಾಲದಲ್ಲಿ ಮಹಾಕಾವ್ಯಗಳಿಗೆ ಸತ್ವವಿತ್ತು. ಆದರೆ, ಮಹಾಕಾವ್ಯಗಳ ರಚನೆಗೆ ಇದು ಸಕಾಲವಲ್ಲ. ಬೇಕಿದ್ದರೆ ನೀಳಗವನ ಬರೆಯಬಹುದು. ಆದರೆ, ಜನ ಬೇಡಿಕೆಯಿಲ್ಲದ ಮಾರುಕಟ್ಟೆಗೆ ಮಹಾಕಾವ್ಯ ಪರಿಚಯಿಸುವ ಪ್ರಯತ್ನ ನಡೆಸುವ ಅಗತ್ಯವಿಲ್ಲ~ ಎಂದರು.

ಇದಕ್ಕೂ ಮುನ್ನ ಗಾಯಕ ಶಿವಮೊಗ್ಗ ಸುಬ್ಬಣ್ಣ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣಭಟ್ಟರ ಭಾವಗೀತೆಯನ್ನು ಹಾಡಿದರೆ, ಗಾಯಕಿ ಬಿ.ಕೆ. ಸುಮಿತ್ರಾ ಭಟ್ಟರಿಗೆ ಶಾಲು ಹೊದಿಸಿ ಅಭಿನಂದಿಸಿದರು. ಗಾಯಕ ವೈ.ಕೆ. ಮುದ್ದುಕೃಷ್ಣ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT