ಕೆ.ಆರ್.ಪುರ: ‘ರಾಜ್ಯದಲ್ಲಿ ವಲಸಿಗರು ಬಂದು ನೆಲಸಿದ್ದಾರೆ. ಅನ್ಯಭಾಷಿಕರ ಪ್ರಾಬಲ್ಯದ ಮಧ್ಯೆ ಕನ್ನಡ ಮಾತನಾಡುವವರೇ ಕಡಿಮೆ ಆಗಿದ್ದಾರೆ. ಅನ್ಯಭಾಷಿಕರೊಂದಿಗೆ ಅವರ ಭಾಷೆಯಲ್ಲಿ ಮಾತನಾಡದೇ ಕನ್ನಡದಲ್ಲಿ ಮಾತನಾಡಬೇಕು. ಅವರಿಗೂ ಕನ್ನಡ ಕಲಿಸಬೇಕು’ ಎಂದು ಸಬ್ ಇನ್ಸ್ಪೆಕ್ಟರ್ ಮಂಜುನಾಥ ತಿಳಿಸಿದರು.
ಬಸವನಪುರ ವಾರ್ಡಿನ ಪ್ರಿಯಾಂಕನಗರದಲ್ಲಿ ಕರ್ನಾಟಕ ಜನಾಭಿವೃದ್ಧಿ ರಕ್ಷಣಾ ವೇದಿಕೆ ವತಿಯಿಂದ ಆಯೋಜಿಸಿದ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು.
ಕರ್ನಾಟಕ ಜನಾಭಿವೃದ್ದಿ ರಕ್ಷಣಾ ವೇದಿಕೆಯ ಕೆ.ಆರ್. ಪುರ ಘಟಕದ ಅಧ್ಯಕ್ಷ ಡಿ.ಕೆ. ಆಶೋಕೇಶವ್, ‘ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಭಾಷೆ ಕನ್ನಡ. ನಮ್ಮ ಭಾಷೆಯ ಪರಂಪರೆಯನ್ನು ಉಳಿಸಿ ಬೆಳೆಸಲು ಪ್ರತಿಯೊಬ್ಬರೂ ಟೊಂಕಕಟ್ಟಿ ದುಡಿಯಬೇಕು’ ಎಂದರು.
ಭುವನೇಶ್ವರಿ ದೇವಿಯ ಮೆರವಣಿಗೆಯಲ್ಲಿ ಮಹಿಳೆಯರು ಕಳಸ ಹೊತ್ತು ಸಾಗಿದರು. ವೀರಗಾಸೆ, ಡೊಳ್ಳು ಕುಣಿತ, ಕಂಸಾಳೆ ಜನರ ಮನಸೂರೆಗೊಂಡಿತು.