ಬೆಂಗಳೂರು: ರಾಜ್ಯದಲ್ಲಿ ತೆರಿಗೆ ಸಂಗ್ರಹವನ್ನು ಮತ್ತಷ್ಟು ಹೆಚ್ಚಿಸಿ, ವಂಚನೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚಿಸಿದರು.
ವಾಣಿಜ್ಯ ತೆರಿಗೆ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿ ಜಿಎಸ್ಟಿ, ಕೆಎಸ್ಟಿ ಹಾಗೂ ವೃತ್ತಿ ತೆರಿಗೆ ಸಂಗ್ರಹದ ಪ್ರಗತಿ ಪರಿಶೀಲನೆ ನಡೆಸಿದರು.
ಅಧಿಕ ತೆರಿಗೆ ಪಾವತಿಸುವವರ ಬಗ್ಗೆ ಹೆಚ್ಚು ಗಮನ ನೀಡುವ ನಿಟ್ಟಿನಲ್ಲಿ ‘ಜಿಎಸ್ಟಿ ಪ್ರೊ’ ಎಂಬ ತಂತ್ರಾಂಶವನ್ನು ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಿದ್ದು, ಇತರ ರಾಜ್ಯ ಹಾಗೂ ಕೇಂದ್ರ ಸರ್ಕಾರ ಅಳವಡಿಸಿಕೊಳ್ಳುವ ಆಸಕ್ತಿ ತೋರಿದೆ ಎಂದರು.
ವಾಣಿಜ್ಯ ತೆರಿಗೆ ಇಲಾಖೆ ಪ್ರಸಕ್ತ ಸಾಲಿನಲ್ಲಿ ₹76,046 ಕೋಟಿ ತೆರಿಗೆ ಸಂಗ್ರಹಿಸಬೇಕಿದ್ದು, ಈವರೆಗೆ ಒಟ್ಟು ₹42,823 ಕೋಟಿ ಸಂಗ್ರಹವಾಗಿದೆ. ಒಟ್ಟಾರೆ ಬೆಳವಣಿಗೆ ದರ ಶೇ 10.3ರಷ್ಟಿದ್ದು, ವಾರ್ಷಿಕ ಗುರಿಯ ಶೇ 56.3ರಷ್ಟು ತೆರಿಗೆ ಸಂಗ್ರಹಿಸಿದಂತಾಗಿದೆ. ಇದರಲ್ಲಿ ಜಿಎಸ್ಟಿ ಒಂದರಿಂದಲೇ ₹33,060 ಕೋಟಿ ಖಜಾನೆ ಸೇರಿದೆಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ತೆರಿಗೆ ಬಾಕಿ ಉಳಿಸಿಕೊಂಡಿದ್ದ 9,592 ಸಂಸ್ಥೆಗಳಿಗೆ ಭೇಟಿ ನೀಡಿ, ₹4,65 ಕೋಟಿ ವಸೂಲಿ ಮಾಡಲಾಗಿದ್ದು, ತೆರಿಗೆ ಪಾವತಿಸದ 74,598 ಸಂಸ್ಥೆಗಳ ನೋಂದಣಿ ರದ್ದುಪಡಿಸಲಾಗಿದೆ. ವರ್ತಕರ ನೋಂದಣಿ ಪರಿಶೀಲನೆ ವೇಳೆ 463 ನಕಲಿ ನೋಂದಣಿ ಪ್ರಕರಣಗಳು ಪತ್ತೆಯಾಗಿದ್ದು, 9 ಮಂದಿಯನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಜಿಎಸ್ಟಿ ತೆರಿಗೆ ಸಂಗ್ರಹದಲ್ಲಿ ರಾಜ್ಯ ಮುಂಚೂಣಿ ಕಾಯ್ದುಕೊಂಡಿದ್ದು, ಒಟ್ಟಾರೆ ತೆರಿಗೆ ಸಂಗ್ರಹದಲ್ಲಿ ಕರ್ನಾಟಕದ ಕೊಡುಗೆ ಶೇ 9.55ರಷ್ಟಿದ್ದು, ಎರಡನೇ ಸ್ಥಾನದಲ್ಲಿದೆ ಎಂದು ವಿವರಿಸಿದರು.