ಬೆಂಗಳೂರು: ‘ಭಾರತ ಮತ್ತು ಕರ್ನಾಟಕವು ಸಾಮರಸ್ಯ ಮತ್ತು ವಿವಿಧ ಧರ್ಮಗಳ ಸಾಮರಸ್ಯದ ನೆಲೆವೀಡಾಗಿದೆ. ಹೀಗಾಗಿ ಧರ್ಮಗಳ ವೈವಿಧ್ಯ ನಮ್ಮಲ್ಲಿ ಶ್ರೀಮಂತವಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.
ಮಲ್ಲೇಶ್ವರದ 8 ನೇ ಮುಖ್ಯರಸ್ತೆಯಲ್ಲಿ ಜೀರ್ಣೋದ್ಧಾರ ಮಾಡಿರುವ ಕ್ರೈಸ್ಟ್ ದ ಕಿಂಗ್ ಚರ್ಚ್ ಅನ್ನು ಉದ್ಘಾಟಿಸಿ ಮಾತನಾಡಿದರು.
‘ಶಾಂತಿ ಮತ್ತು ಕರುಣೆಗಳನ್ನು ಬೋಧಿಸಿದ ಏಸು ಕ್ರಿಸ್ತನ ಪ್ರಾರ್ಥನೆಗೆ ಈ ಆಲಯ ಭವ್ಯವಾಗಿ ತಲೆ ಎತ್ತಿರುವುದು ಐತಿಹಾಸಿಕ ದಿನವಾಗಿದೆ. ಭಾರತದಲ್ಲಿ ಇರುವಷ್ಟು ಧಾರ್ಮಿಕ ಪರಿಸರ ಬೇರೆಲ್ಲೂ ಇಲ್ಲ. ಇದು ಇಡೀ ಜಗತ್ತಿಗೆ ಮಾದರಿಯಾಗಿದೆ. ನಾವೆಲ್ಲರೂ ವಿಶ್ವ ಮಾನವರಾಗಬೇಕು’ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಆರ್ಚ್ ಬಿಷಪ್ ರೆ.ಪೀಟರ್ ಮಚಾಡೋ, ಆರ್ಚ್ ಬಿಷಪ್ ಎಮಿರೈಟಸ್ ರೆ.ಬರ್ನಾರ್ಡ್ ಮೊರಾಸ್, ರೆ.ಫಾ. ನೋರ್ಮನ್ ಬರ್ನಾರ್ಡ್ ಮುಂತಾದವರು ಇದ್ದರು. ಕಾರ್ಯಕ್ರಮದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.