ಬೆಂಗಳೂರು: ಸಂಸ್ಕೃತ ವಿಶ್ವವಿದ್ಯಾಲಯದ ‘ಗೌರವ ಡಿ.ಲಿಟ್’ ಪದವಿಯನ್ನು ಹಿರಿಯ ಸಂಸ್ಕೃತ ವಿದ್ವಾಂಸ ಪಂ. ಮಳಗಿ ಜಯತೀರ್ಥಾಚಾರ್ಯ ಅವರಿಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ಪ್ರದಾನ ಮಾಡಿದರು.
ಗಾಯನ ಸಮಾಜದಲ್ಲಿ ಶನಿವಾರ ನಡೆದ ಸಂಸ್ಕೃತ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪಾಲ್ಗೊಂಡು ಅವರು, ಇನ್ನೊಬ್ಬ ಸಂಸ್ಕೃತ ಪಂಡಿತ ಎಸ್. ಕಣ್ಣನ್ ಅವರಿಗೆ ಡಿ. ಲಿಟ್, 30 ಮಂದಿಗೆ ಪಿಎಚ್. ಡಿ ಪದವಿ, 43 ಮಂದಿಗೆ ಎಂ.ಫಿಲ್ ಪದವಿ ಪ್ರದಾನ ಮಾಡಿದರು.
ಪಂ. ಮಳಗಿ ಜಯತೀರ್ಥಾಚಾರ್ಯ ಅವರು ಕರ್ನಾಟಕ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿಯೂ ಕೆಲಸ ಮಾಡಿದ್ದಾರೆ. ಮಾತುಂಗಾದ ಮಾವುಲಿ ವಿದ್ಯಾಪೀಠದಲ್ಲಿ ಅವರು ಶಾಸ್ತ್ರಗಳನ್ನು ಅಧ್ಯಯನ ಮಾಡಿದ್ದರು.
ಪಶ್ಚಿಮ ಬಂಗಾಳ ಬೇಲೂರಿನ ಸ್ವಾಮಿ ವಿವೇಕಾನಂದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸ್ವಾಮಿ ಆತ್ಮಪ್ರಿಯಾನಂದ ಅವರು ಕೊಲ್ಕತಾದಿಂದಲೇ ವರ್ಚುವಲ್ ಮೂಲಕ ಘಟಿಕೋತ್ಸವ ಭಾಷಣ ಮಾಡಿದರು..
ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕಾ.ಇ. ದೇವನಾಥನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಲಸಚಿವ ಎಂ.ಕೊಟ್ರೇಶ್, ಹಿರಿಯ ಉನ್ನತ ಅಧಿಕಾರಿಗಳು, ಪ್ರೊಫೆಸರ್ಗಳು, ಸಿಬ್ಬಂದಿ, ವಿಶೇಷ ಆಹ್ವಾನಿತರು ಘಟಿಕೋತ್ಸವಕ್ಕೆ ಸಾಕ್ಷಿಯಾದರು.