ಬೆಂಗಳೂರು: ‘ಬೆಳಗಾವಿ, ಕಾರವಾರ ಹಾಗೂ ನಿಪ್ಪಾಣಿ ಮಹಾರಾಷ್ಟ್ರಕ್ಕೆ ಸೇರಿದ್ದು’ ಎಂಬ ಅಲ್ಲಿನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಹೇಳಿಕೆಯನ್ನು ಖಂಡಿಸಿರುವ ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ), ‘ರಾಜ್ಯ ಸರ್ಕಾರವು ಗಡಿ ಉಸ್ತುವಾರಿ ಸಚಿವರನ್ನು ನೇಮಕ ಮಾಡಬೇಕು’ ಎಂದು ಒತ್ತಾಯಿಸಿದೆ.
‘ಅಜಿತ್ ಪವಾರ್ ಅವರು ತಮ್ಮ ಹುದ್ದೆಯ ಘನತೆಯನ್ನು ಮರೆತು ಆಡಿರುವ ಈ ಪ್ರಚೋದನಕಾರಿ ಮಾತುಗಳು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವಂತದ್ದಾಗಿದೆ. ಹೊಣೆಗಾರಿಕೆಯ ಸ್ಥಾನದಲ್ಲಿರುವವರು ಈ ರೀತಿಯ ಹಗುರ ಮಾತುಗಳನ್ನು ಆಡಬಾರದು. ಕೆಲವು ವರ್ಷಗಳ ಹಿಂದೆ ಮಹಾರಾಷ್ಟ್ರದ ಅಂದಿನ ಗೃಹಸಚಿವ ಆರ್.ಆರ್. ಪಾಟೀಲ್ ಅವರು ಇಂತಹದೆ ಉದ್ರೇಕಕಾರಿ ಮಾತುಗಳನ್ನು ಆಡಿದ್ದರು. ಅವರನ್ನು ಚುನಾವಣಾ ಆಯೋಗವೇ ಎಚ್ಚರಿಸಿತ್ತು. ನಮ್ಮ ರಾಜ್ಯ ಸರ್ಕಾರವು ಎಫ್ಐಆರ್ ದಾಖಲಿಸಿತ್ತು’ ಎಂದು ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ತಿಳಿಸಿದರು.
‘ಮಹಾರಾಷ್ಟ್ರ ಸರ್ಕಾರವು ಬೆಳಗಾವಿ ತನ್ನದೆಂದು ಸುಪ್ರೀಂಕೋರ್ಟ್ನಲ್ಲಿ ಹೂಡಿರುವ ದಾವೆಯು 16 ವರ್ಷ ಗಳಾದರೂ ವಿಚಾರಣೆಗೆ ಬರದೆ ನನೆಗುದಿಗೆ ಬಿದ್ದಿದೆ. ಹತಾಶೆಗೊಂಡ ಅಲ್ಲಿನ ಸರ್ಕಾರವು ದಾವೆಯ ಅರ್ಜಿ ಯನ್ನು ಪದೇ ಪದೇ ಬದಲಿಸುತ್ತಿದೆ. ಸುಪ್ರೀಂಕೋರ್ಟ್ನಲ್ಲಿ ರಾಜ್ಯದ ಪರ ವಾದ ಮಂಡಿಸುವ ಕಾನೂನು ತಜ್ಞರ ಜತೆಗೆ ಕೂಡಲೇ ಗಂಭೀರವಾಗಿ ಸಮಾಲೋಚನೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ.