ಕೆಂಗೇರಿ: ರಾಜ್ಯದ ಜನತೆ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಸರ್ಕಾರ ಕೋವಿಡ್ ಸೋಂಕು ತಡೆಗೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಸ್ಪಷ್ಟಪಡಿಸಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಬೋಳಾರೆ, ಕಗ್ಗಲಿಪುರ, ಕೆ.ಗೊಲ್ಲಹಳ್ಳಿ, ಕುಂಬಳಗೂಡು, ಚಂದ್ರಪ್ಪ ಸರ್ಕಲ್ ಹಾಗೂ ತಾವರೆಕೆರೆ, ಕನ್ನಳ್ಳಿ, ಸೂಲಿಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಶುಕ್ರವಾರ ಭೇಟಿ ನೀಡಿ ಅವರು ಮಾತನಾಡಿದರು.
ಕೋವಿಡ್ 2ನೇ ಅಲೆಯ ಸೋಂಕು ರಾಜ್ಯದೆಲ್ಲೆಡೆ ವ್ಯಾಪಕವಾಗಿ ಹರಡುತ್ತಿದೆ. ಇದರಿಂದ ರಾಜ್ಯ ಸರ್ಕಾರ ಕಠಿಣವಾದ ನಿಯಮಗಳನ್ನು ಜಾರಿಗೆ ತಂದಿದೆ. ನಿಯಮಗಳನ್ನು ಪಾಲಿಸುವ ಮೂಲಕ ಕೋವಿಡ್ ತಡೆಗೆ ಸಹಕರಿಸಬೇಕು ಎಂದರು.
ಆರಂಭದಲ್ಲಿ ಕೆಲ ಗೊಂದಲಗಳಾಗುವುದು ಸಹಜ. ಆಮ್ಲಜನಕ ಮತ್ತು ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ವೈದ್ಯರು, ಆಸ್ಪತ್ರೆಗಳು ಹಾಗೂ ಅಧಿಕಾರಿಗಳು ಜನರಿಗೆ ತೊಂದರೆಯಾಗದಂತೆ, ಯಾವುದೇ ದೂರು ಬಾರದಂತೆ ಕಾರ್ಯನಿರ್ವಹಿಸಿಬೇಕು ಎಂದು ಎಚ್ಚರಿಕೆ ನೀಡಿದರು.
ಸಿಬ್ಬಂದಿ ಕೊರತೆ ನೀಗಿಸಲು ಮನವಿ: ಇದೇ ವೇಳೆ ಸಿಬ್ಬಂದಿ ಕೊರತೆ ಬಗ್ಗೆ ಗಮನ ಸೆಳೆದ ತಾವರೆಕೆರೆ ವೈದ್ಯಾಧಿಕಾರಿ ಡಾ.ನಂದಿನಿ, ಲ್ಯಾಬ್ ಟೆಕ್ನಿಷಿಯನ್ ಸಾವಿನಿಂದ ಖಾಲಿ ಇರುವ ಹುದ್ದೆಗೆ ಯಾರನ್ನು ಭರ್ತಿ ಮಾಡಿಲ್ಲ. ಶೀಘ್ರ ನೇಮಕ ಮಾಡುವಂತೆ ಮನವಿ ಮಾಡಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕುಮಾರ್, ಬೆಂಗಳೂರು ದಕ್ಷಿಣ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನಾಗವೇಣಿ, ತಹಶೀಲ್ದಾರ್ ರಾಮಲಕ್ಷ್ಮಣ ಇದ್ದರು