ನವದೆಹಲಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಬಳಿ ಇರುವ ಕಿತ್ತಗಾನಹಳ್ಳಿ ಕೆರೆಯ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಸೂಚಿಸಿದೆ.
ಕೈಗಾರಿಕಾ ಪ್ರದೇಶದ ವಿಷಪೂರಿತ ನೀರು ಕೆರೆಯನ್ನು ಸೇರಿ ಕಲುಷಿತಗೊಳಿಸುತ್ತಿದೆ. ಜನ– ಜಾನುವಾರುಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದರೂ ಗಮನ ಹರಿಸಲಾಗುತ್ತಿಲ್ಲ ಎಂದು ದೂರಿ ಸಂಜಯ್ ರಾವ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ಪ್ರಧಾನ ಪೀಠ ಈ ಆದೇಶ ನೀಡಿದೆ.
ಕೆರೆಯ ದುಃಸ್ಥಿತಿ ಕುರಿತು ಗಮನ ಹರಿಸುವ ಮೂಲಕ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ಒಂದು ತಿಂಗಳೊಳಗೆ ಈ ಕುರಿತ ವರದಿ ಸಲ್ಲಿಸಬೇಕು ಎಂದು ಮಂಡಳಿಗೆ ಸೂಚಿಸಿರುವ ಹಸಿರು ಪೀಠ, ವಿಚಾರಣೆಯನ್ನು 2020ರ ಜನವರಿ 10ಕ್ಕೆ ಮುಂದೂಡಿದೆ.
ನಾರಾಯಣ ಹೃದಯಾಲಯದ ಹಿಂಭಾಗದಲ್ಲಿ ಇರುವ ಈ ಕೆರೆಗೆ ಕೈಗಾರಿಕೆಗಳ ವಿಷಪೂರಿತ ನೀರು, ತ್ಯಾಜ್ಯ ಸೇರಿಕೊಳ್ಳುತ್ತಿದೆ. ಈ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಪ್ರತಿಭಟನೆ ನಡೆಸಿ ಬೊಮ್ಮಸಂದ್ರ ಪುರಸಭೆಯ ಗಮನ ಸೆಳೆದರೂ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರು ದೂರಿದ್ದರು.