ಹೆಸರಘಟ್ಟ: ‘ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಹೆಸರಿನಲ್ಲಿ ರೈತರ ಜಮೀನು ಬಲಿಯಾಗುತ್ತಿದೆ’ ಎಂದು ರಾಜ್ಯ ರೈತ ಸಂಘದ ರಾಜ್ಯ ಘಟಕದ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ದೊಡ್ಡ ಬ್ಯಾಲಕೆರೆ ಗ್ರಾಮದಲ್ಲಿ ಡಾ.ಶಿವರಾಮಕಾರಂತ ಬಡಾವಣೆ ಹೋರಾಟ ಸಮಿತಿ ಮತ್ತು ನಿವೇಶನದಾರರ ಸಂತ್ರಸ್ತರ ಸಮಿತಿ ಬಿ.ಡಿ.ಎ. ಅಧಿಕಾರಿಗಳ ವಿರುದ್ದ ಹಮ್ಮಿಕೊಂಡಿದ್ದ ಸತ್ಯಾಗ್ರಹ ಉದ್ದೇಶಿಸಿ ಮಾತನಾಡಿದರು.
‘ಬಿಡಿಎ ಅಧಿಕಾರಿಗಳು ನ್ಯಾಯಾಲಯಕ್ಕೆ ಇಂದಿನ ಸ್ಥಿತಿಯನ್ನು ಮರೆ ಮಾಚಿದ್ದಾರೆ. 8 ಲೇಔಟ್ಗಳು, 16 ನಿವೇಶನಗಳಿಗೆ ಬಿಡಿಎ ಅಧಿಕಾರಿಗಳು ಅನುಮತಿ ಪತ್ರವನ್ನು ಕೊಟ್ಟಿದ್ದಾರೆ. ರೈತರ ಜಮೀನುಗಳನ್ನು ಕಬಳಿಸುವ ಹುನ್ನಾರು ಅವರದ್ದು’ ಎಂದರು.
ಹಸಿರು ಸೇನೆ ಅಧ್ಯಕ್ಷರಾದ ನಂಜುಂಡಪ್ಪ ಮಾತನಾಡಿ, ‘ಮುಖ್ಯಮಂತ್ರಿಯವರು ಶಿವರಾಮ ಕಾರಂತ ಬಡಾವಣೆ ವಿಷಯದಲ್ಲಿ ಆತಂಕಪಡುವ ಅಗತ್ಯವಿಲ್ಲ. ಒಂದು ವಾರ ಸಮಯ ಕೊಡಿ ಕೂತು ಮಾತನಾಡೋಣ ಎಂದು ಹೇಳಿದ್ದರು. ಆದರೆ ಹೇಳಿ ಹದಿನೈದು ದಿನ ಕಳೆದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ’ ಎಂದು ತಿಳಿಸಿದರು.
‘17 ಗ್ರಾಮಗಳ ರೈತರು 17 ದಿನಗಳ ಕಾಲ ಸತ್ಯಾಗ್ರಹವನ್ನು ಮಾಡುತ್ತೀವಿ. ನಂತರ ಬೃಹತ್ ಪ್ರತಿಭಟನೆ ಮಾಡಿ ಮುಖ್ಯಮಂತ್ರಿ ಭೇಟಿಯಾಗುತ್ತೇವೆ’ ಎಂದು ಸಮಿತಿಯ ಕಾರ್ಯದರ್ಶಿ ಕೃಷ್ಣಪ್ಪ ತಿಳಿಸಿದರು.