ಬೆಂಗಳೂರು: ಜೆ.ಪಿ. ನಗರದ 7ನೇ ಹಂತದಲ್ಲಿರುವ ಎಂಎನ್ಸಿ ಸ್ಪೋರ್ಟ್ಸ್ ಅಕಾಡೆಮಿಯ ಈಜುಕೊಳದಲ್ಲಿ ಮುಳುಗಿ ಬಾಲಕರಿಬ್ಬರು ಮೃತಪಟ್ಟಿದ್ದು, ಈ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಜರಗನಹಳ್ಳಿಯ ಮೋಹನ್ (13) ಹಾಗೂ ಜಯಂತ್ (13) ಮೃತರು. ಇವರಿಬ್ಬರು ಜರಗನಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಸೋಮವಾರ ಶಾಲೆಗೆ ಹೋಗಿದ್ದ ಇವರಿಬ್ಬರು, ತರಗತಿಗೆ ಗೈರಾಗಿ ಈಜುಕೊಳಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಪಿ. ಕೃಷ್ಣಕಾಂತ್ ತಿಳಿಸಿದರು.
’ಈಜುಕೊಳದಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಾಲಕರಿಬ್ಬರಿಂದ ₹ 100 ಪಡೆದು ಒಳಗೆ ಬಿಟ್ಟಿದ್ದರು. ಸಿಬ್ಬಂದಿಯ ನಿರ್ಲಕ್ಷ್ಯದಿಂದಲೇ ಬಾಲಕರು ಮೃತಪಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ’ ಎಂದು ಹೇಳಿದರು.
‘ಈಜುಕೊಳ ನಿರ್ವಹಣೆಯನ್ನು ಶೇಖರ್ ಎಂಬಾತ ಗುತ್ತಿಗೆ ಪಡೆದಿದ್ದ. ಮೋಹಿನ್ ಎಂಬಾತ ತರಬೇತುದಾರನಾಗಿದ್ದ. ನರೇಶ್ ಎಂಬಾತ ಈಜುಕೊಳದ ಸಿಬ್ಬಂದಿ. ಈ ಮೂವರ ವಿರುದ್ಧವೂ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.’
‘ಆರೋಪಿ ಮೋಹಿನ್ನನ್ನು ಬಂಧಿಸಲಾಗಿದೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದಾರೆ’ ಎಂದು ತಿಳಿಸಿದರು.