ಬೆಂಗಳೂರು: ಗುಂಡಿನ ದಾಳಿಗೆ ’ಸಮೋಸ’ ಕಾರಣ

ಬೆಂಗಳೂರು: ಕೆ.ಆರ್. ಪುರ ಠಾಣೆಯ ವ್ಯಾಪ್ತಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಆಟೊ ಬಾಬು ಎಂಬುವರ ಮೇಲೆ ನಡೆದಿದ್ದ ಗುಂಡಿನ ದಾಳಿ ಪ್ರಕರಣ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
‘ಸ್ಥಳೀಯ ನಿವಾಸಿಗಳಾದ ಮೊಹಮ್ಮದ್ ಸುಹೇಲ್ ಪಾಷಾ, ಮಿರ್ಜಾ ಹಾಗೂ ಶೋಹೆಬ್ ಬಂಧಿತರು. ಕೃತ್ಯಕ್ಕೆ ಬಳಸಿದ್ದ ಪಿಸ್ತೂಲ್ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಗಾಯಗೊಂಡಿದ್ದ ಬಾಬು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ವೈಟ್ಫೀಲ್ಡ್ ವಿಭಾಗದ ಡಿಸಿಪಿ ದೇವರಾಜ್ ತಿಳಿಸಿದರು.
‘ಬಾಬು ಅವರು ರಿಯಲ್ ಎಸ್ಟೇಟ್ ಕಚೇರಿ ಹೊಂದಿದ್ದರು. ಪಕ್ಕದ ಕಟ್ಟಡದಲ್ಲಿ ಆರೋಪಿ ಮಿರ್ಜಾ ಸಮೋಸ ಅಂಗಡಿ ಇಟ್ಟುಕೊಂಡಿದ್ದ. ಸಮೋಸಾ ತಿನ್ನಲು ಬರುತ್ತಿದ್ದ ಯುವಕರು, ಬಾಬು ಅವರ ಕಚೇರಿ ಬಳಿ ಅಡ್ಡಾದಿಡ್ಡಿಯಾಗಿ ಬೈಕ್ಗಳನ್ನು ನಿಲುಗಡೆ ಮಾಡುತ್ತಿದ್ದರು. ಇದೇ ವಿಚಾರವಾಗಿ ಬಾಬು ಹಾಗೂ ಮಿರ್ಜಾ ನಡುವೆ ಜಗಳವಾಗಿತ್ತು. ಠಾಣೆ ಮೆಟ್ಟಿಲೇರಿದ್ದ ಇಬ್ಬರಿಗೂ ಪೊಲೀಸರು ಬುದ್ದಿವಾದ ಹೇಳಿ ಕಳುಹಿಸಿದ್ದರು’ ಎಂದೂ ತಿಳಿಸಿದರು.
‘ಕೆಲ ದಿನಗಳ ಹಿಂದಷ್ಟೇ ಕಟ್ಟಡದ ಮಾಲೀಕರು, ಸಮೋಸ ಅಂಗಡಿಯನ್ನು ಖಾಲಿ ಮಾಡಿಸಿದ್ದರು. ಅದರಿಂದ ಸಿಟ್ಟಾದ ಮಿರ್ಜಾ, ಇದಕ್ಕೆ ಬಾಬು ಕಾರಣವೆಂದು ತಿಳಿದು ಸ್ನೇಹಿತರ ಜೊತೆ ಸೇರಿ ಕೊಲೆ ಮಾಡಲು ಸಂಚು ರೂಪಿಸಿದ್ದ. ಇದೇ 22ರಂದು ರಾತ್ರಿ ಬಾಬು ಅವರನ್ನು ಅಡ್ಡಗಟ್ಟಿದ್ದ ಆರೋಪಿಗಳು, ಗುಂಡಿನ ದಾಳಿ ನಡೆಸಿದ್ದರು. ಗುಂಡಿನಿಂದ ತಪ್ಪಿಸಿಕೊಂಡಿದ್ದ ಬಾಬು ಮೇಲೆ ಮಾರಕಾಸ್ತ್ರಗಳಿಂದಲೂ ಹಲ್ಲೆ ಮಾಡಿ ಪರಾರಿಯಾಗಿದ್ದರು’ ಎಂದೂ ಪೊಲೀಸರು ಮಾಹಿತಿ ನೀಡಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.