ಬೆಂಗಳೂರು: ‘ಕನ್ನಡದ ಲೇಖಕರು ಕೇವಲ ಧಾರವಾಡ, ಮೈಸೂರು ಅಥವಾ ಬೆಂಗಳೂರಿನಲ್ಲಿ ಮಾತ್ರ ಇಲ್ಲ, ನಾಡಿನಾದ್ಯಂತ ಇದ್ದಾರೆ ಎನ್ನುವ ಅಂಶವನ್ನು ಟ್ರಸ್ಟ್ ಇಂದು ತೋರಿಸಿಕೊಟ್ಟದೆ’ ಎಂದು ಕವಿ ಎಚ್. ಎಸ್. ವೆಂಕಟೇಶಮೂರ್ತಿ ಶ್ಲಾಘಿಸಿದರು.
ಕೆ.ಎಸ್. ನರಸಿಂಹಸ್ವಾಮಿ ಟ್ರಸ್ಟ್ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಕೆ.ಎಸ್.ನ ಪ್ರಶಸ್ತಿ’ ಹಾಗೂ ‘ಕೆ.ಎಸ್.ನ ಕಾವ್ಯಗಾಯನ ಪ್ರಶಸ್ತಿ’ ಪ್ರದಾನ ಮಾಡಿ ಅವರು ಮಾತನಾಡಿದರು.
‘ಕೆ.ಎಸ್.ನ ಕಾವ್ಯಗಾಯನ ಪ್ರಶಸ್ತಿ’ ಪುರಸ್ಕೃತ, ಗಾಯಕ ಶಿವಮೊಗ್ಗ ಸುಬ್ಬಣ್ಣ ಅವರ ಬಗ್ಗೆ ಮಾತನಾಡಿ, ‘ಭಾಷೆ ಬಗ್ಗೆ ಪ್ರೀತಿ ಇದ್ದವರಿಗೆ ಮಾತ್ರ ಕಾವ್ಯ ಇಷ್ಟವಾಗುತ್ತದೆ. ಅಂತೆಯೇ ಸುಬ್ಬಣ್ಣ ಸಹ. ಭಾಷೆಯ ಬಗೆಗೆ ಬಹಳ ಕಾಳಜಿ ಇರುವವರು. ಆದ್ದರಿಂದಲೇ ಅವರ ಹಾಡುಗಾರಿಕೆ ಮನಸ್ಸಿಗೆ ತಟ್ಟುತ್ತದೆ’ ಎಂದು ಅಭಿಪ್ರಾಯಪಟ್ಟರು.
‘ಕೆ.ಎಸ್.ನ ಪ್ರಶಸ್ತಿ’ ಪುರಸ್ಕೃತ, ಲೇಖಕ ವಿಷ್ಣು ನಾಯ್ಕ ಅವರ ಕುರಿತು ಮಾತನಾಡಿ, ‘ವಿಷ್ಣು ಅವರು ಅಕ್ಷರ ಲೋಕದ ಅಕ್ಕರೆಯ ಮನುಷ್ಯ.ಬಡವರ, ದೀನರ ಬಗ್ಗೆ ಅವರಿಗಿರುವ ಕಾಳಜಿ ಅಪಾರ. ಇದೇ ಅವರ ಬರಹಗಳಲ್ಲೂ ಕಾಣಸಿಗುತ್ತದೆ’ ಎಂದರು.