ಕೊಳಚೆ ನೀರು ಹರಿಯುತ್ತಿರುವ ಅನೇಕ ರಾಜಕಾಲುವೆಗಳು ಕೆರೆಯನ್ನು ಸಂಪರ್ಕಿಸುವುದನ್ನು ತಪ್ಪಿಸಲಾಗಿದೆ ಎಂದು ಸರ್ಕಾರವೇ ಹೇಳಿದೆ. ಕೊಳಚೆನೀರು ರಾಜಕಾಲುವೆ ಸೇರುವುದನ್ನು ತಪ್ಪಿಸುವ ಕಾರ್ಯವನ್ನು ಜಲಮಂಡಳಿ ಮಾಡುತ್ತಿದ್ದರೂ ಇದು ಸಂಪೂರ್ಣ ನಿಂತಿಲ್ಲ. ನಗರದ 210 ಕೆರೆಗಳಲ್ಲಿ ಬಿಬಿಎಂಪಿ 89 ಕೆರೆಗಳನ್ನು ಅಭಿವೃದ್ಧಿಪಡಿಸಿದ್ದು, 39 ಕೆರೆಗಳ ಅಭಿವೃದ್ಧಿ ಪ್ರಗತಿಯಲ್ಲಿದೆ. ಹೂಳೆತ್ತುವಿಕೆ, ಬದುಗಳ ರಚನೆ, ಒಳಹರಿಸುವ ಸುಧಾರಣೆ, ಕೊಳಚೆ ನೀರು ಬೇರ್ಪಡಿಸುವಿಕೆಗೆ ಚರಂಡಿ ರಚನೆ, ನಡಿಗೆ ಮಾರ್ಗ ರಚನೆ ಭದ್ರತಾ ಕೊಠಡಿ ರಚನೆಯಂತಹ ಚಟುವಟಿಕೆಗಳು ಕೆರೆಗಳ ಪುನಃಶ್ಚೇತನಕ್ಕೆ ಅನುವು ಮಾಡಿಕೊಡುವುದೇನೋ ನಿಜ. ಆದರೆ, ಕೆರೆ ಮರುಪೂರಣ ಚಟುವಟಿಕೆಯನ್ನು ಸರ್ಕಾರ ಕೈಗೆತ್ತಿಕೊಳ್ಳುತ್ತಿಲ್ಲ ಎಂಬುದನ್ನೂ ವರದಿಯಲ್ಲಿ ಬೊಟ್ಟುಮಾಡಲಾಗಿದೆ.