ಬೆಂಗಳೂರು: ‘ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥ ಲಾಲ್ಬಾಗ್ನಲ್ಲಿ ಆಯೋಜಿಸಿರುವ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಂಜೆ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ‘ಲಾಲ್ಬಾಗ್ ಉದ್ಯಾನವು ಇಡೀ ವಿಶ್ವದಲ್ಲಿಯೇ ಪ್ರಸಿದ್ದವಾಗಿದೆ. ಸುಮಾರು 240 ಎಕರೆ ವಿಸ್ತೀರ್ಣದಲ್ಲಿದ್ದು, ವಿವಿಧ ಜಾತಿಯ ಮರ–ಗಿಡಗಳಿವೆ ಹೊಂದಿದೆ. ಬ್ರಿಟಿಷರ ಕಾಲದಲ್ಲಿ 140 ಎಕರೆ ಪ್ರದೇಶದಲ್ಲಿದ್ದ ಉದ್ಯಾನವು ಕೆಂಗಲ್ ಹನುಮಂತಯ್ಯ ಅವರು 100 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು, 240 ಎಕರೆಗೆ ವಿಸ್ತರಿಸಿದ್ದರು’ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಆಯೋಜಿಸಿರುವ 214ನೇ ಫಲಪುಷ್ಪ ಪ್ರದರ್ಶನ ಇದಾಗಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಸಸ್ಯಕಾಶಿ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ. ಇದೇ 15ರವರೆಗೂ ಈ ಹೂವಿನ ಲೋಕವನ್ನು ಕಣ್ತುಂಬಿಕೊಳ್ಳಬಹುದು.
ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ವಿಧಾನಸೌಧವು 7.2 ಲಕ್ಷ ವಿವಿಧ ತಳಿಯ ಪುಷ್ಪಗಳಲ್ಲಿ ಕಂಗೊಳಿಸುತ್ತಿದೆ. ಅದರ ಮುಂಭಾಗದಲ್ಲಿ ಕೆಂಗಲ್ ಹನುಮಂತಯ್ಯ ಅವರ 14 ಅಡಿ ಎತ್ತರದ ಪ್ರತಿಮೆಯು ನೋಡುಗರನ್ನು ಸೆಳೆಯುತ್ತಿದೆ. ಹಿಂಭಾಗದಲ್ಲಿ ಮೈಸೂರು ಕೇಂದ್ರ ಕಾರಾಗೃಹ, ಅದರ ಹಿಂಭಾಗದಲ್ಲಿ ಲಾಲ್ಬಾಗ್ ಪ್ರತಿಕೃತಿಯನ್ನು ಸೃಷ್ಟಿಸಲಾಗಿದೆ. ಗಾಜಿನ ಮನೆಯ ಕೇಂದ್ರ ಭಾಗದ ಬಲಬದಿಗೆ ಶಿವಪುರ ಧ್ವಜ ಸತ್ಯಾಗ್ರಹ ಸೌಧದ ಪುಷ್ಪ ಮಾದರಿಯನ್ನು 3.48 ಲಕ್ಷ ಸೇವಂತಿಗೆ ಹೂವುಗಳನ್ನು ನಿರ್ಮಿಸಲಾಗಿದೆ. ಎಡಭಾಗದಲ್ಲಿ ಕೆಂಗಲ್ ಹನುಮಂತಯ್ಯ ಅವರು ಮಂಡಿಸಿದ್ದ ರೈಲ್ವೆ ಬಜೆಟ್ನ ಸವಿನೆನಪಿಗಾಗಿ ರೈಲಿನ ಪ್ರತಿಕೃತಿಯು ಅನಾವರಣಗೊಳಿಸಲಾಗಿದೆ.
ದೋಸೆ ಸವಿದ ಸಿದ್ದರಾಮಯ್ಯ: ಲಾಲ್ಬಾಗ್ ಹತ್ತಿರವಿರುವ ಎಂಟಿಆರ್ ಹೋಟೆಲ್ನಲ್ಲಿ ಸಿದ್ದರಾಮಯ್ಯ ದೋಸೆ ಸವಿದರು. ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ್, ಶಾಸಕ ಉದಯ್ ಬಿ. ಗರುಡಾಚಾರ್ ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಗೋವಿಂದರಾಜು ಇದ್ದರು.
ಸಾರ್ವಜನಿಕರಿಗೆ ನಿರಾಸೆ: ‘ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಲಾಲ್ಬಾಗ್ಗೆ ಬಂದಿದ್ದ ಸಾರ್ವಜನಿಕರಿಗೆ ನಿರಾಸೆಯಾಯಿತು. ಶುಕ್ರವಾರ ಅಧಿಕೃತವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡುವುದಕ್ಕೆ ಮಾತ್ರ ಸೀಮಿತವಾಗಿತ್ತು. ಸಾರ್ವಜನಿಕರಿಗೆ ಶನಿವಾರದಿಂದ ಫಲಪುಷ್ಪ ಪ್ರದರ್ಶನ ಮುಕ್ತವಾಗಿರಲಿದೆ’ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದರು.
‘ಪ್ರಜಾಪ್ರಭುತ್ವಕ್ಕೆ ಸಂದ ಜಯ’
‘ಸುಪ್ರೀಂ ಕೋರ್ಟ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನ್ಯಾಯ ನೀಡಿದೆ. ಇದು ಪ್ರಜಾಪ್ರಭುತ್ವಕ್ಕೆ ಸಂದ ಜಯ’ ಎಂದು ಸಿದ್ದರಾಮಯ್ಯ ಹೇಳಿದರು. ‘ರಾಹುಲ್ ಗಾಂಧಿ ಅವರಿಗೆ ಸೂರತ್ ನ್ಯಾಯಾಲಯ ಶಿಕ್ಷೆಯನ್ನು ವಿಧಿಸಿ ತೀರ್ಪು ನೀಡಿತ್ತು. ಅದಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಷೆ ನೀಡಿದ್ದು ಅವರ ಲೋಕಸಭೆಯ ಸದಸ್ಯತ್ವ ಮುಂದುವರಿಯುವ ರೀತಿಯಲ್ಲಿ ತೀರ್ಪು ಪ್ರಕಟಿಸಿದೆ. ಈ ತೀರ್ಪನ್ನು ನಾನು ಸ್ವಾಗತಿಸುತ್ತೇನೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.