ಬೆಂಗಳೂರು: ಜ್ಞಾನಭಾರತಿಯ ನ್ಯಾಷನಲ್ ಕಾನೂನು ಕಾಲೇಜು ಬಳಿ ವಿದ್ಯುತ್ ಕಂಬವೊಂದಕ್ಕೆ ಲ್ಯಾಂಬೋರ್ಗಿನಿ ಕಾರು ಡಿಕ್ಕಿ ಹೊಡೆದಿದ್ದು, ಕಾರನ್ನು ಸ್ಥಳದಲ್ಲಿ ಬಿಟ್ಟು ಚಾಲಕ ಪರಾರಿಯಾಗಿದ್ದಾರೆ.
‘ಜ್ಞಾನಭಾರತಿ ಕ್ಯಾಂಪಸ್ನಲ್ಲಿ ಸುತ್ತಾಡುತ್ತಿದ್ದ ಎನ್ನಲಾದ ಚಾಲಕ, ಅತಿ ವೇಗವಾಗಿ ನಿರ್ಲಕ್ಷ್ಯದಿಂದ ಕಾರು ಚಲಾಯಿಸಿದ್ದ. ಮಾರ್ಗಮಧ್ಯೆ ರಸ್ತೆ ಪಕ್ಕದ ವಿದ್ಯುತ್ ಕಂಬಕ್ಕೆ ಕಾರು ಗುದ್ದಿದೆ. ಇದರಿಂದ ತಂತಿ ಸಮೇತ ಕಂಬ ಉರುಳಿಬಿದ್ದಿತ್ತು. ಕಾರಿನ ಮುಂಭಾಗ ಜಖಂಗೊಂಡಿದೆ’ ಎಂದು ಸಂಚಾರ ಪೊಲೀಸರು ಹೇಳಿದರು.
‘ಅಪಘಾತದಿಂದಾಗಿ ಸ್ಥಳದಲ್ಲಿ ಕೆಲ ನಿಮಿಷ ವಾಹನಗಳ ಸಂಚಾರ ಬಂದ್ ಆಗಿತ್ತು. ವಿಪರೀತ ದಟ್ಟಣೆ ಸಹ ಉಂಟಾಯಿತು. ಅಪಘಾತವಾದ ಕಾರು ಹಾಗೂ ಕಂಬವನ್ನು ತೆರವುಗೊಳಿಸಿ, ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಲಾಯಿತು’ ಎಂದು ತಿಳಿಸಿದರು.
‘ಗ್ಲೋಬಲ್ ಟೆಕ್ ಪಾರ್ಕ್ ಕಂಪನಿ ಹೆಸರಿನಲ್ಲಿ ಕಾರು (ಕೆ.ಎ 51 ಎಂಇ 7029) ನೋಂದಣಿ ಆಗಿದೆ. ಚಾಲಕ ಪರಾರಿಯಾಗಿರುವುದರಿಂದ ಆತನ ಹೆಸರು ಗೊತ್ತಾಗಿಲ್ಲ’ ಎಂದರು.