ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಂತಿಮ ಅಧಿಸೂಚನೆ ಹೊರಡಿಸಿದ್ದ 2 ಎಕರೆ 20 ಗುಂಟೆ ಜಾಗದಲ್ಲಿನ ಒತ್ತುವರಿಯನ್ನು ಅಧಿಕಾರಿಗಳು ಶನಿವಾರ ತೆರವುಗೊಳಿಸಿದರು.
ನಗರದ ಎಚ್.ಬಿ.ಆರ್. ಬಡಾವಣೆಯ 1ನೇ ಹಂತ, ಕಾಚರಕನಹಳ್ಳಿ ಗ್ರಾಮದ ಸರ್ವೆ ನಂ. 181, 182 ಮತ್ತು 183ರಲ್ಲಿ ಬಿಡಿಎಗೆ ಸೇರಿರುವ ಜಾಗದಲ್ಲಿ ನಿರ್ಮಾಣವಾಗಿದ್ದ ಅನಧಿಕೃತ ಕಟ್ಟಡ, ಗ್ಯಾರೇಜ್ಗಳನ್ನು ಬಿಡಿಎ ಅಧಿಕಾರಿಗಳು ತೆರವುಗೊಳಿಸಿದರು. ಈ ಜಾದ ಮೌಲ್ಯ ಸುಮಾರು ₹150 ಕೋಟಿ ಎಂದು ಅಂದಾಜಿಸಲಾಗಿದೆ.
‘ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಸ್ತಿ’ ಎಂದು ಕರ್ನಾಟಕ ರಾಜ್ಯ ಸರ್ಕಾರ 1985ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿತ್ತು. 200 ಅಧಿಕಾರಿಗಳು ಸೇರಿದಂತೆ 100 ಜನ ಕಾರ್ಮಿಕರು ಹಾಗೂ ಬಿಡಿಎದ 15 ಅಧಿಕಾರಿಗಳ ಸಮ್ಮುಖದಲ್ಲಿ ಒತ್ತುವರಿಯನ್ನು ತೆರವುಗೊಳಿಸಿ ಜಾಗವನ್ನು ಪ್ರಾಧಿಕಾರದ ಸುಪರ್ದಿಗೆ ತೆಗೆದುಕೊಳ್ಳಲಾಯಿತು.
‘ಬಿಡಿಎ ಆಯುಕ್ತ ಎನ್.ಜಯರಾಂ ಅವರು ಪ್ರಾಧಿಕಾರದ ಕಾನೂನು ಕೋಶದ ಅಧಿಕಾರಿಗಳೊಂದಿಗೆ ಚರ್ಚಿಸಿ, ಸಲಹೆಯನ್ನು ಪಡೆದು, ತೆರವು ಕಾರ್ಯಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು’ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.
‘ಬಿಡಿಎ ಈ ಹಿಂದೆಯೂ ಇದೇ ಜಾಗದಲ್ಲಿ ಒತ್ತುವರಿಯನ್ನು ತೆರವುಗೊಳಿಸಿತ್ತು. ಅದನ್ನು ಭದ್ರಪಡಿಸಿಕೊಳ್ಳದೆ ಇರುವುದರಿಂದ ಮತ್ತೆ ಒತ್ತುವರಿಯಾಗಿತ್ತು. ಈಗಲಾದರೂ ಬೇಲಿ ಹಾಕಿ ಬಿಡಿಎ ಉಳಿಸಿಕೊಳ್ಳಲಿ’ ಎಂದು ಸ್ಥಳೀಯ ನಿವಾಸಿ ರಾಮ್ರಾಜ್ ರೆಡ್ಡಿ ಹೇಳಿದರು.
‘ಹಲವು ವರ್ಷಗಳಿಂದ ನಾವು ಇಲ್ಲಿ ಶೆಡ್ ಹಾಕಿಕೊಂಡು, ಗ್ಯಾರೇಜ್ ನಡೆಸುತ್ತಿದ್ದೆವು. ಮಾಲೀಕರಿಗೆ ಬಾಡಿಗೆಯನ್ನೂ ನೀಡುತ್ತಿದ್ದೆವು. ನಮಗೆ ಒಂದು ನೋಟಿಸ್ ನೀಡದೆ ಎಲ್ಲವನ್ನೂ ತೆರವುಗೊಳಿಸಿದರು. ಇದರಿಂದ ನಮಗೆ ಅತ್ಯಂತ ನಷ್ಟವಾಗಿದೆ’ ಎಂದು ಅಬ್ದುಲ್ ಸಾಹಿಲ್ ತಿಳಿಸಿದರು.