ಬೆಂಗಳೂರು: ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಮಧ್ಯೆ ಸುಮಧುರ ಬಾಂಧವ್ಯ ಇದ್ದಾಗ ಮಾತ್ರ ಪ್ರಜಾಪ್ರಭುತ್ವ ಹೆಚ್ಚು ಕ್ರಿಯಾಶೀಲವಾಗಿರುತ್ತದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.
ಗುಜರಾತಿನ ಕೆವಾಡಿಯಾದಲ್ಲಿ ನಡೆಯುತ್ತಿರುವ ವಿವಿಧ ರಾಜ್ಯಗಳ ವಿಧಾನಸಭಾಧ್ಯಕ್ಷರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ಈ ಮೂರು ಅಂಗಗಳ ಅಧಿಕಾರ ಸಮಾನವಾಗಿರಬೇಕು. ಒಂದು ಅಂಗ ಇನ್ನೊಂದು ಅಂಗದ ಮೇಲೆ ಸವಾರಿ ಮಾಡುವಂತಾಗಬಾರದು. ಪ್ರತಿಯೊಂದೂ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲೇ, ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.
ದೇಶದ ಮಟ್ಟದಲ್ಲಿ ಸಂಸತ್ತು, ರಾಜ್ಯದಲ್ಲಿ ವಿಧಾನಸಭೆ ಶಾಸನ ರಚನೆ ಮಾಡುವ ಅಧಿಕಾರ ಹೊಂದಿರುವಂತೆಯೇ, ಕೇಂದ್ರಾಡಳಿತ ಪ್ರದೇಶಗಳಿಗೂ ಶಾಸನ ರಚನೆಯ ಅಧಿಕಾರ ನೀಡಬೇಕು ಎಂದು ಕಾಗೇರಿ ಸಲಹೆ ನೀಡಿದರು.
ಸಂವಿಧಾನದ ದಿನದ ಮೂಲಕ ಕರ್ನಾಟಕದಲ್ಲಿ ಸಂವಿಧಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಮಾಡಿಕೊಂಡು ಬಂದಿದ್ದೇವೆ. ಶಾಲಾ, ಕಾಲೇಜು ಮತ್ತು ಸಂಘ–ಸಂಸ್ಥೆಗಳಲ್ಲಿ ಈ ಕುರಿತು ತಿಳಿವಳಿಕೆ ಮೂಡಿಸಲಾಗುತ್ತಿದೆ ಎಂದು ಕಾಗೇರಿ ಹೇಳಿದರು.