ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಯಾದ ಕೂಡಲೇ ಪೋಸ್ಟರ್, ಬ್ಯಾನರ್ಗಳನ್ನು ತೆರವುಗೊಳಿಸಲು ಈಗಲೇ ತಂಡ ರಚಿಸಿ ತಯಾರಾಗಿರಬೇಕು ಎಂದು ಮುಖ್ಯ ಚುನಾವಣಾಧಿಕಾರಿಯವರು ಎಲ್ಲ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಚುನಾವಣೆ ಘೋಷಣೆಯಾದ 24 ಗಂಟೆ, 48 ಗಂಟೆ, 72 ಗಂಟೆಗಳಲ್ಲಿ ಸರ್ಕಾರಿ, ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಇರುವ ಅನಧಿಕೃತ ಗೋಡೆ ಬರಹ, ಭಿತ್ತಿ ಪತ್ರ, ಬ್ಯಾನರ್ಗಳನ್ನು ತೆರವು ಮಾಡಬೇಕಾಗುತ್ತದೆ. ಈ ಸಂಬಂಧ ಮಾಹಿತಿ ಸಂಗ್ರಹಿಸಲು ತಂಡಗಳನ್ನು ಮುಂಗಡವಾಗಿ ರಚಿಸಿಕೊಳ್ಳಬೇಕು. ಚುನಾವಣೆ ಘೋಷಣೆಯಾದ ತಕ್ಷಣ ಮಾಹಿತಿಯನ್ನು ಚುನಾವಣಾಧಿಕಾರಿ ಕಚೇರಿಗೆ ನೀಡಬೇಕು ಎಂದು ಪತ್ರದಲ್ಲಿ ಸೂಚನೆ ನೀಡಿದ್ದಾರೆ.